ADVERTISEMENT

ನಿಮಿಷಾ ಮರಣದಂಡನೆ ರದ್ದು: ಭಾರತೀಯ ಗ್ರ್ಯಾಂಡ್ ಮುಫ್ತಿ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2025, 2:56 IST
Last Updated 29 ಜುಲೈ 2025, 2:56 IST
<div class="paragraphs"><p>ನಿಮಿಷಾ ಪ್ರಿಯಾ</p></div>

ನಿಮಿಷಾ ಪ್ರಿಯಾ

   

ನವದೆಹಲಿ: ಯೆಮೆನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಚೇರಿ ಸೋಮವಾರ ತಿಳಿಸಿದೆ.

ಗ್ರಾಂಡ್ ಮುಫ್ತಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಯಿತು ಎಂದು ಅದು ತಿಳಿಸಿದೆ.

ADVERTISEMENT

ಕೇರಳದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ, ಜೂನ್ 2018ರಲ್ಲಿ ಯೆಮೆನ್ ಪ್ರಜೆಯೊಬ್ಬರನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದರು. ನಂತರ ಈ ವರ್ಷ ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು, ಈ ನಿರ್ಧಾರವನ್ನು ಯೆಮೆನ್‌ನ ಸುಪ್ರೀಂ ನ್ಯಾಯಾಂಗ ಮಂಡಳಿಯು ಎತ್ತಿಹಿಡಿದಿತ್ತು. ಈ ನಡುವೆ ಭಾರತದ ಸತತ ಪ್ರಯತ್ನದ ಫಲವಾಗಿ ಮರಣದಂಡನೆ ಮುಂದೂಡಲ್ಪಟ್ಟಿತ್ತು.

ಈ ನಡುವೆ ಷರಿಯಾ ಕಾನೂನು ಅಡಿ ಕ್ಷಮೆ ಸೇರಿದಂತೆ ಇತರೆ ಕಾನೂನು ಹೋರಾಟದಲ್ಲಿ ನಿಮಿಷಾ ಕುಟುಂಬ ತೊಡಗಿಸಿಕೊಂಡಿತ್ತು.

ಯೆಮೆನ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲ ವರ್ಷಗಳ ಕಾಲ ನಿಮಿಷಾ ಕೆಲಸ ಮಾಡಿದ್ದರು. 2014ರಲ್ಲಿ ಆರ್ಥಿಕ ಕಾರಣಗಳಿಂದಾಗಿ ಆಕೆಯ ಪತಿ ಮತ್ತು ಮಗಳು ಭಾರತಕ್ಕೆ ಹಿಂದಿರುಗಿದ್ದರು. ಬಳಿಕ, ಯೆಮೆನ್‌ನಲ್ಲಿ ನಾಗರಿಕ ಸಂಘರ್ಷ ಭುಗೆಲೆದ್ದಿದ್ದರಿಂದ ವೀಸಾ ಸಿಗದೆ ಭಾರತದಲ್ಲೇ ಉಳಿದರು.

ಬಳಿಕ, 2015ರಲ್ಲಿ ಯೆಮೆನ್ ನಿವಾಸಿ ತಲಾಲ್ ಅಬ್ಡೊ ಮಹದಿ ಜೊತೆ ಸೇರಿ ಸನಾದಲ್ಲಿ ಖಾಸಗಿ ಕ್ಲಿನಿಕ್ ಆರಂಭಿಸಲು ನಿಮಿಷಾ ಮುಂದಾಗಿದ್ದರು. ಯೆಮೆನ್ ನಿಯಮಗಳ ಪ್ರಕಾರ, ಅಲ್ಲಿನ ಸ್ಥಳೀಯರು ಮಾತ್ರ ಕ್ಲಿನಿಕ್ ಆರಂಭಿಸಲು ಅನುಮತಿ ಇದೆ.

ಇದೇ ಸ್ನೇಹದಲ್ಲಿ 2015ರಲ್ಲಿ ನಿಮಿಷಾ ಜೊತೆ ಕೇರಳಕ್ಕೆ ಬಂದಿದ್ದ ತಲಾಲ್, ತಿಂಗಳ ಕಾಲ ಉಳಿದಿದ್ದ. ಬಳಿಕ, ಆಕೆಯ ಮದುವೆ ಫೋಟೊ ಕದ್ದು ಅದನ್ನು ತಿರುಚಿ ತಾವಿಬ್ಬರೂ ಮದುವೆಯಾಗಿರುವುದಾಗಿ ಪ್ರಚಾರ ಮಾಡಿದ್ದ.

'ನಿಮಿಷಾಳ ಕ್ಲಿನಿಕ್ ಆರಂಭವಾಗಿ ಸ್ವಲ್ಪ ಸಮಯದ ನಂತರ ಮಹದಿ ಕ್ಲಿನಿಕ್‌ನ ಮಾಲೀಕತ್ವದ ದಾಖಲೆಗಳನ್ನು ತಿರುಚಿದನು. ನಿಮಿಷಾ ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದ ಆತ ಆಕೆಯ ಸಂಪಾದನೆಯ ಹಣ ಲಪಟಾಯಿಸಲು ಶುರು ಮಾಡಿದ್ದನು. ಬಳಿಕ, ಪಾಸ್‌ಪೋರ್ಟ್ ಕಸಿದು ಇಟ್ಟುಕೊಂಡಿದ್ದ ಆತ ನಿಮಿಷಾ ಮತ್ತು ಅವರ ಕುಟುಂಬಕ್ಕೆ ಕಿರುಕುಳ ನೀಡಿದ್ದ ಎಂದು ನಿಮಿಷಾ ತಾಯಿ ಆರೋಪಿಸಿದ್ದರು.

ಆತ ನಿಮಿಷಾಳ ಆಭರಣ, ಸಂಪಾದನೆಯನ್ನು ಕಸಿದು ಇನ್ನಿಲ್ಲದಂತೆ ಹಿಂಸಿಸುತ್ತಿದ್ದ ಎಂದು ತಾಯಿ ದೂರಿದ್ದಾರೆ.

ಮಹದಿ ಕಾಟ ಸಹಿಸಲಾಗದೇ ನಿಮಿಷಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಮಹದಿಯನ್ನು ವಿಚಾರಿಸುವ ಬದಲು ನಿಮಿಷಾಳನ್ನೇ 6 ದಿನ ಜೈಲಿಗೆ ಹಾಕಿದ್ದರು. ಜೈಲಿನಿಂದ ಹೊರಬಂದ ಬಳಿಕ ನಿಮಿಷಾಗೆ ಹಿಂಸೆ ನೀಡುವುದನ್ನು ಮಹದಿ ಮತ್ತಷ್ಟು ತೀವ್ರಗೊಳಿಸಿದ್ದ. ನಿಮಿಷಾ ಕಾಡಿಬೇಡಿಕೊಂಡರೂ ಪಾಸ್‌ಪೋರ್ಟ್ ನೀಡಿರಲಿಲ್ಲ. ಬಳಿಕ, ಒಂದು ದಿನ ಮೆಡಿಸಿನ್ ಓವರ್‌ಡೋಸ್ ಆಗಿ ಮಹದಿ ಮೃತಪಟ್ಟಿದ್ದು. ಬಳಿಕ, ಹತ್ಯೆ ಆರೋಪ ನಿಮಿಷಾ ಮೇಲೆ ಬಂದು ಶಿಕ್ಷೆಗೆ ಒಳಗಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.