ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಲಿರುವ ನಾಲ್ವರ ಮೃತ ದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಒದಗಿಸಬೇಕು, ಅವರ ಅಂಗಾಂಗಗಳನ್ನು ದಾನ ಮಾಡುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಎಫ್. ಸಲ್ಡಾನಾ ಹಾಗೂ ವಕೀಲ ದಿಲ್ರಾಜ್ ರೋಹಿತ್ ಸಿಕ್ವೇರಿಯಾ ಈ ಅರ್ಜಿ ಸಲ್ಲಿಸಿದ್ದು, ಗಲ್ಲು ಶಿಕ್ಷೆಯ ಪ್ರತಿ ಪ್ರಕರಣದಲ್ಲೂ ಈ ನಿರ್ದೇಶನವನ್ನು ಪೂರ್ವ ನಿದರ್ಶನವನ್ನಾಗಿ ಪರಿಗಣಿಸುವಂತೆ ಸೂಚಿಸಬೇಕು ಎಂದು ಕೋರಿದ್ದಾರೆ.
ದೇಶದಲ್ಲಿ ಜಾರಿ ಇರುವ ನೀತಿಯ ಅನುಸಾರ ಅಂಗಾಂಗ ದಾನವು ಸ್ವಯಂ ಪ್ರೇರಿತವಾಗಿದೆ. ಆದರೆ, ಚೀನಾ ಮತ್ತಿತರ ದೇಶಗಳಲ್ಲಿ ಗಲ್ಲು ಶಿಕ್ಷೆಗೆ ಒಳಗಾಗುವವರ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ಕಸಿ ಮಾಡಲು ಅವಕಾಶವಿದೆ. ಅಪರಾಧಿಗಳಿಗೆ ಅಂಗಾಂಗ ದಾನದ ಮೂಲಕ ಪಶ್ಚಾತ್ತಾಪಕ್ಕೆಅಂತಿಮ ಅವಕಾಶ ಕಲ್ಪಿಸಬೇಕು. ಅಗತ್ಯ ಇರುವವರಿಗೆ ಆ ಅಂಗಗಳನ್ನು ಕಸಿ ಮಾಡಿದಲ್ಲಿ ಸಹಾಯವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ನಾಲ್ವರಿಗೆ ಮಾರ್ಚ್ 3ರಂದು ಗಲ್ಲು ವಿಧಿಸುವಂತೆ ತೀರ್ಪು ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.