ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜ. 22ರಂದು ಬೆಳಿಗ್ಗೆ 7ಕ್ಕೆ ಗಲ್ಲಿಗೇರಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ದೆಹಲಿ ಕೋರ್ಟ್ ತಿಹಾರ್ ಜೈಲು ಅಧಿಕಾರಿಗಳಿಗೆ ಗುರುವಾರ ಸೂಚಿಸಿದೆ.
‘ಅಪರಾಧಿಗಳ ಪೈಕಿ ಮುಕೇಶ್ ಸಿಂಗ್ ದಯಾ ಅರ್ಜಿ ಸಲ್ಲಿಸಿದ್ದು, ಅದು ಇತ್ಯರ್ಥವಾಗಬೇಕಿದೆ. ಹೀಗಾಗಿ ಅಪರಾಧಿಗಳನ್ನು ಗಲ್ಲಿಗೇರಿಸುವ ಸಂಬಂಧ ಹೊಸ ದಿನಾಂಕ ನಿಗದಿಪಡಿಸುವಂತೆ ಕೋರಿ ದೆಹಲಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ’ ಜೈಲು ಅಧಿಕಾರಿಗಳು ಕೋರ್ಟ್ ಗಮನಕ್ಕೆ ತಂದಾಗ, ವರದಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿತು.
ಸ್ಥಳಾಂತರ: ನಾಲ್ವರು ಆರೋಪಿಗಳನ್ನು ತಿಹಾರ್ ಜೈಲಿನ ಕೊಠಡಿ ಸಂಖ್ಯೆ 3ಕ್ಕೆ (ಗಲ್ಲಿಗೇರಿಸುವ ಕೊಠಡಿ) ಗುರುವಾರ ಸ್ಥಳಾಂತರಿಸಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
‘ಇಲ್ಲಿಯತನಕ ವಿನಯ್ ಶರ್ಮಾನನ್ನು ತಿಹಾರ್ ಜೈಲಿನ ಕೊಠಡಿ ಸಂಖ್ಯೆ 4, ಅಕ್ಷಯ್, ಮುಕೇಶ್ ಮತ್ತು ಪವನ್ನನ್ನು ಕೊಠಡಿ ಸಂಖ್ಯೆ 2ರಲ್ಲಿ ಇರಿಸಲಾಗಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಲ್ವರು ಅಪರಾಧಿಗಳನ್ನು ಜನವರಿ 22ರ ಬೆಳಿಗ್ಗೆ 7ಕ್ಕೆ ಗಲ್ಲಿಗೇರಿಸಬೇಕೆಂದು ದೆಹಲಿ ನ್ಯಾಯಾಲಯ ಕಳೆದ ವಾರ ಆದೇಶಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.