ADVERTISEMENT

ನಿರ್ಭಯಾ ಪ್ರಕರಣ ಅಪರಾಧಿ ವಿನಯ್ ಶರ್ಮಾ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 12:26 IST
Last Updated 14 ಫೆಬ್ರುವರಿ 2020, 12:26 IST
ಪ್ರಜಾವಾಣಿ
ಪ್ರಜಾವಾಣಿ   

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ರಾಷ್ಟ್ರಪತಿಗಳು ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠ, ಕ್ಷಮಾದಾನ ಅರ್ಜಿ ತಿರಸ್ಕಾರದ ಬಗ್ಗೆ ನ್ಯಾಯಾಂಗ ಪರಿಶೀಲನೆಯ ಯಾವುದೇ ಅಗತ್ಯ ಕಾಣಿಸುತ್ತಿಲ್ಲ. ಇದು ಯಾವುದೇ ರೀತಿಯ ವಿವಾದಕ್ಕೆ ಒಳಪಟ್ಟಿಲ್ಲ ಎಂದು ತಿಳಿಸಿದೆ.

ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿರುವ ಶರ್ಮಾ, ‘ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಬೇಕು. ಜೈಲಿನಲ್ಲಿ ಹಿಂಸೆಯಿಂದಾಗಿ ಮಾನಸಿಕ ಆರೋಗ್ಯ ಹದಗೆಟ್ಟಿದೆ’ ಎಂದು ಅರ್ಜಿಯಲ್ಲಿ ತಿಳಿಸಿದ್ದ. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ತೀರ್ಪನ್ನು ಶುಕ್ರವಾರ (ಫೆ.14) ಮಧ್ಯಾಹ್ನ 2 ಗಂಟೆಗೆ ನೀಡುವುದಾಗಿ ಹೇಳಿತ್ತು.

ADVERTISEMENT

ಮಾನಸಿಕವಾಗಿ ಸಮರ್ಥವಾಗಿಲ್ಲದಿರುವುದನ್ನು ರಾಷ್ಟ್ರಪತಿಗಳು ಪರಿಗಣಿಸಿಲ್ಲ ಎಂದು ದೂರಿದ್ದನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ, ಆತ ಸದೃಢ ಮತ್ತು ಉತ್ತಮ ಮನಸ್ಥಿತಿಯನ್ನು ಹೊಂದಿದ್ದಾನೆ ಎಂದು ಹೇಳಿದೆ.

ಫೆಬ್ರವರಿ 12ರ ದಿನಾಂಕವಿರುವ ವೈದ್ಯಕೀಯ ವರದಿಯನ್ನು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಯಾವುದೇ ಮಾನಸಿಕ ಹಿಂಸೆಯಿಂದ ಬಳಲುತ್ತಿಲ್ಲದಿರುವುದು ವರದಿಯಲ್ಲಿ ತಿಳಿದಿದೆ.

‘ಜೈಲಿನಲ್ಲಿ ಅಕ್ರಮವಾಗಿ ಆತನನ್ನು ಪ್ರತ್ಯೇಕವಾಗಿರಿಸುವ ಮೂಲಕ ಅಧಿಕಾರಿಗಳು ಕಾನೂನನ್ನು ಉಲ್ಲಂಘಿಸಿದ್ದಾರೆ. ಇದರಿಂದ ಶರ್ಮಾನ ಹಕ್ಕುಗಳ ಉಲ್ಲಂಘನೆಯಾಗಿದೆ. ಹಿಂಸೆಯಿಂದಾಗಿ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಆತ ಜೈಲಿನಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಜೈಲಿನಲ್ಲಿ ಮಾನಸಿಕ ಅಸ್ವಸ್ಥರಾಗಿದ್ದರೆ, ಗಲ್ಲುಶಿಕ್ಷೆಯನ್ನು ಬದಲಿಸಲು ಕೋರಲು ಅದು ಸಹ ಒಂದು ಆಧಾರವಾಗುತ್ತದೆ’ ಎಂದು ಆತನ ಪರ ವಕೀಲ ಎ.ಪಿ. ಸಿಂಗ್ ಅವರು ಅರ್ಜಿಯಲ್ಲಿ ಹೇಳಿದ್ದರು.

ಜನವರಿ 29ರಂದು ಶರ್ಮಾ, ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದ. ಆದರೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕ್ಷಮಾದಾನದ ಅರ್ಜಿಯನ್ನು ಫೆಬ್ರುವರಿ 1ರಂದು ತಿರಸ್ಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.