ನವದೆಹಲಿ:ನಿರ್ಭಯಾಗೆ ನ್ಯಾಯ ದೊರಕಿಸಿಕೊಡುವ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು2012ರ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಸಂತ್ರಸ್ತೆ ನಿರ್ಭಯಾ ತಾಯಿ ಆಶಾದೇವಿ ಮನವಿ ಮಾಡಿದ್ದಾರೆ.
ಅಪರಾಧಿಗಳ ಗಲ್ಲು ಶಿಕ್ಷೆ ವಿಳಂಬವಾಗುತ್ತಿರುವ ಬಗ್ಗೆ ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿದ ಅವರು,ಸರ್ಕಾರವು ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ನನ್ನ ಮಗಳ ಸಾವಿನೊಂದಿಗೆ ಆಟವಾಡಲಾಗುತ್ತಿದೆ ಎಂದು ಎಂದು ಗಂಭೀರ ಆರೋಪ ಮಾಡಿದ್ದಾರೆ.
‘ನನ್ನ ಕುಟುಂಬವು 7 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದೆ. ಆದರೂ ಸರ್ಕಾರ ನಮ್ಮ ಕಷ್ಟಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಅವರ (ಅಪರಾಧಿಗಳ) ಮನವಿಗಳನ್ನು ಕೇಳಲಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
‘ಮಹಿಳಾ ಸುರಕ್ಷತೆಯ ಭರವಸೆ ನೀಡಿ ನೀವು 2014ರಲ್ಲಿ ಅಧಿಕಾರಕ್ಕೆ ಬಂದಿದ್ದಿರಿ. ಹೀಗಾಗಿ ದಯಮಾಡಿ ಅಪರಾಧಿಗಳನ್ನು ಜ.22ರಂದು ಗಲ್ಲಿಗೇರಿಸುವಂತೆ ಮಾಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಆಶಾದೇವಿ ಮನವಿ ಮಾಡಿದ್ದಾರೆ.
ಗಲ್ಲು ಶಿಕ್ಷೆ ವಿಳಂಬಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಎಎಪಿ ಆರೋಪ–ಪ್ರತ್ಯಾರೋಪ ಮಾಡಿದ್ದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ನಾನು ಯಾವತ್ತೂ ರಾಜಕೀಯ ಮಾತನಾಡಿಲ್ಲ. ಆದರೆ, 2012ರಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದವರೇ ಇಂದು ರಾಜಕೀಯ ಲಾಭಕ್ಕಾಗಿ ನನ್ನ ಮಗಳ ಸಾವಿನ ಜತೆ ಆಟವಾಡುತ್ತಿದ್ದಾರೆ ಎಂದು ಹೇಳಲು ಬಯಸುತ್ತೇನೆ’ ಎಂದು ಆಶಾದೇವಿ ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.