ADVERTISEMENT

ಅತ್ಯಾಚಾರಿಗಳು ಗಲ್ಲಿಗೇರಿದ ವಿಷಯ ತಿಳಿದು ನಿರ್ಭಯಾ ತವರೂರಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 11:22 IST
Last Updated 20 ಮಾರ್ಚ್ 2020, 11:22 IST
ನಿರ್ಭಯಾ ತವರೂರಿನಲ್ಲಿ ಸಂಭ್ರಮ
ನಿರ್ಭಯಾ ತವರೂರಿನಲ್ಲಿ ಸಂಭ್ರಮ   

ಬಲಿಯಾ (ಉತ್ತರಪ್ರದೇಶ): ಅದೊಂದು ಊರಿನಲ್ಲಿ ಹಬ್ಬ ಇಲ್ಲದಿದ್ದರೂ ಜನರು ಸಂಭ್ರಮಪಟ್ಟರು. ಡೋಲು ತಮಟೆ ಸದ್ದಿಗೆ ಊರಿನ ಜನರು ಕುಣಿದು ಕುಪ್ಪಳಿಸುತ್ತಿದ್ದರು.

ಅದಕ್ಕೆ ಕಾರಣ ನಿರ್ಭಯಾ ಎಂಬ ಒಂದೇ ಹೆಸರು. ಆ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿ ಕೊಲೆಗೈದ ಅಪರಾಧಿಗಳು ಶುಕ್ರವಾರ ಬೆಳಿಗ್ಗೆ ಗಲ್ಲಿಗೇರಿದ ಕ್ಷಣ.

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು ಎಂಬ ಸುದ್ದಿ ತಿಳಿದ ಕೂಡಲೆ ಆಕೆಯ ಅಜ್ಜಿಯ ಊರಿನಲ್ಲಿ ಡೋಲು, ತಮಟೆ, ಕಂಸಾಳೆಬಾರಿಸಿಕೊಂಡು ಇಡೀ ಊರಿನ ಜನ ಕುಣಿಯುತ್ತಾ ಸಂಭ್ರಮಪಟ್ಟರು.

ADVERTISEMENT

'ಈ ದಿನಕ್ಕಾಗಿ ನಾವು ಕಾಯುತ್ತಿದ್ದೆವು. ಇದು ಕೇವಲ ನಿರ್ಭಯಾ ಒಬ್ಬಳಿಗೆ ಸಿಕ್ಕ ನ್ಯಾಯವಲ್ಲ. ಇಡೀ ದೇಶದ ಹೆಣ್ಣು ಮಕ್ಕಳಿಗೆ ದೊರೆತ ನ್ಯಾಯ' ಎಂದು ನಿರ್ಭಯಾ ತಾತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಏಳು ವರ್ಷಗಳ ಕಾಲ ಕತ್ತಲಲ್ಲಿ ಇದ್ದೆವು. ಇದೀಗ ಆ ಕತ್ತಲು ಸರಿದಿದೆ ಎಂದು ಅವರು ತಿಳಿಸಿದ್ದಾರೆ.

ಅಪರಾಧಿಗಳಾದ ಅಕ್ಷಯ್ ಸಿಂಗ್ ಟಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್ 2012ರಡಿಸೆಂಬರ್‌‌ನಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾಳನ್ನು ಚಲಿಸುವ ಬಸ್ಸಿನಲ್ಲಿಅತ್ಯಾಚಾರ ಎಸಗಿದ್ದರು. ನಂತರ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕೆಲ ದಿನಗಳ ನಂತರ ನಿರ್ಭಯಾ ಸಾವನ್ನಪ್ಪಿದ್ದರು.

ಆರು ಮಂದಿ ಅಪರಾಧಿಗಳಲ್ಲಿ ಒಬ್ಬಾತ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ. ಮತ್ತೊಬ್ಬ ಬಾಲಾರೋಪಿ ಎಂಬ ಕಾರಣಮೂರು ವರ್ಷಗಳು ಬಾಲಮಂದಿರದಲ್ಲಿ ಇದ್ದು ನಂತರ ಬಿಡುಗಡೆಯಾದ. ಉಳಿದ ನಾಲ್ಕು ಮಂದಿ ಜೈಲಿನಲ್ಲಿಯೇ ಇದ್ದು ಶುಕ್ರವಾರ ಗಲ್ಲಿಗೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.