ADVERTISEMENT

ಬಿಜೆಪಿಯಲ್ಲಿ ಧಮ್ ಇರುವುದು ಗಡ್ಕರಿಗೆ ಮಾತ್ರ: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 9 ಮೇ 2019, 18:21 IST
Last Updated 9 ಮೇ 2019, 18:21 IST
   

ನವದೆಹಲಿ: ಬಿಜೆಪಿಯಲ್ಲಿ ಧಮ್ ಇರುವುದು ಕೇಂದ್ರ ಸಚಿವ ನಿತಿನ್ಗಡ್ಕರಿಗೆ ಮಾತ್ರ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

ನಾಗ್ಪುರದಲ್ಲಿ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್) ಮಾಜಿ ಕಾರ್ಯಕರ್ತರ ಜತೆ ಸಂವಾದ ನಡೆಸಿದ ಗಡ್ಕರಿ ಪಕ್ಷದ ಕಾರ್ಯಕರ್ತರು ಮೊದಲು ಮನೆಯ ಜವಾಬ್ದಾರಿಗಳನ್ನು ಪೂರೈಸಬೇಕು. ಅದನ್ನು ಮಾಡಲಾಗದವರು ದೇಶವನ್ನು ನಿರ್ವಹಿಸಲಾರರು ಎಂದಿದ್ದರು.

ಬಿಜೆಪಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಡಲು ಸಿದ್ದರಿದ್ದೇವೆ ಎಂದು ಹೇಳಿದ ಹಲವಾರು ಮಂದಿಯನ್ನು ನಾನು ಭೇಟಿ ಮಮಾಡಿದ್ದೇನೆ. ಹಾಗೆ ಹೇಳಿದವರಲ್ಲಿ ನಾನು ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ? ಎಂಬ ಪ್ರಶ್ನೆಯನ್ನು ಕೇಳಿದ್ದೇನೆ. ಅದಕ್ಕೆ ಅವರು ವ್ಯಾಪಾರ ಉತ್ತಮವಾಗಿ ನಡೆಯದೇ ಇರುವ ಕಾರಣ ಅಂಗಡಿ ಮುಚ್ಚಿದ್ದೇನೆ.ಮನೆಯಲ್ಲಿ ಹೆಂಡತಿ, ಮಕ್ಕಳು ಇದ್ದಾರೆ ಎಂದು ಉತ್ತರಿಸಿದ್ದರು.
ಆಗ ನಾನು ಅವರಲ್ಲಿ, ಮೊದಲು ನಿಮ್ಮ ಮನೆ ನೋಡಿಕೊಳ್ಳಿ ಎಂದು ಹೇಳಿದೆ.ಯಾಕೆಂದರೆ ಸಂಸಾರವನ್ನು ಸರಿಯಾಗಿ ನೋಡಿಕೊಳ್ಳದವರು ದೇಶವನ್ನು ಸಂಭಾಳಿಸಲಾರರು.

ಗಡ್ಕರಿ ಬಗ್ಗೆ ಪ್ರಕಟವಾಗಿರುವ ಸುದ್ದಿಯನ್ನು ಟ್ವೀಟಿಸಿರುವ ರಾಹುಲ್, ಅವರ ಧೈರ್ಯವನ್ನು ಮೆಚ್ಚಿದ್ದಾರೆ.ಅದೇ ಟ್ವೀಟಿನಲ್ಲಿ ಮೂರು ವಿಷಯಗಳ ಬಗ್ಗೆ ಸಚಿವರು ಮಾತನಾಡಬೇಕೆಂದು ಮನವಿ ಮಾಡಿದ್ದಾರೆ.

ರಾಹುಲ್ ಹೇಳಿದ ಮೂರು ವಿಷಯಗಳು ಈ ರೀತಿ ಇವೆ
1. ರಫೇಲ್ ಹಗರಣ ಮತ್ತು ಅನಿಲ್ ಅಂಬಾನಿ
2, ರೈತರ ಸಂಕಷ್ಟ
3. ಸಂಸ್ಥೆಗಳ ಅಳಿವು
ರಫೇಲ್ ಹಗರಣದ ಬಗ್ಗೆ ಕಾಂಗ್ರೆಸ್ ಪಕ್ಷ ನಿರಂತರವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ.ಏತನ್ಮಧ್ಯೆ, ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷವು ರೈತರನ್ನು ಕಡೆಗಣಿಸಿದ್ದು, ಕೇಂದ್ರೀಯ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.