ADVERTISEMENT

ನಿವಾರ್ ತೀವ್ರತೆ ದುರ್ಬಲ: ಪುದುಚೇರಿ ಕರಾವಳಿ ದಾಟಿದ ಚಂಡಮಾರುತ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 2:12 IST
Last Updated 26 ನವೆಂಬರ್ 2020, 2:12 IST
 ಪುದುಚೇರಿಯ ಕರಾವಳಿ ತೀರ
ಪುದುಚೇರಿಯ ಕರಾವಳಿ ತೀರ   

ಚೆನ್ನೈ: ‘ನಿವಾರ್’‌ ಚಂಡಮಾರುತ ಗುರುವಾರ ಬೆಳಗ್ಗೆ 2.30ರ ಸುಮಾರಿಗೆ ಪುದುಚೇರಿ ಕರಾವಳಿಯನ್ನು ಅಪ್ಪಳಿಸಿದ್ದು ಚಂಡಮಾರುತದ ತೀವ್ರತೆ ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಕೆಲವು ಗಂಟೆಗಳಲ್ಲಿ ನಿವಾರ್ ಚಂಡಮಾರುತದತೀವ್ರತೆದುರ್ಬಲಗೊಳ್ಳಲಿದೆ. ಇಲ್ಲಿಯವರೆಗೂ ಪುದುಚೇರಿಯಲ್ಲಿ 233 ಮಿ.ಮೀಟರ್ಹಾಗೂ ಕಡಲೂರಿನಲ್ಲಿ 237 ಮಿ.ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ ಚೆನ್ನೈ, ಪುದುಚೇರಿ, ನಾಗಪಟ್ಟಣಂ, ಕಾಂಚೀಪುರಂ, ಚಿದಂಬರಂ, ತಿರುವಲ್ಲೂರು, ಚೆಂಗಲ್ಪಟ್ಟು ಸೇರಿದಂತೆ ತಮಿಳುನಾಡಿನ 16 ಜಿಲ್ಲೆಗಳಲ್ಲಿ ಚಂಡಮಾರುತದ ಪರಿಣಾಮ ವ್ಯಾಪಕ ಮಳೆ ಸುರಿಯುತ್ತಿದ್ದು ಗುರುವಾರವೂ ಸರ್ಕಾರಿ ರಜೆ ಘೋಷಿಸಲಾಗಿದೆ.

ADVERTISEMENT

ಬುಧವಾರ ಬೆಳಿಗ್ಗೆ 5.30ರ ಹೊತ್ತಿಗೆ ಗಂಟೆಗೆ 7 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ ‘ನಿವಾರ್‌’ ಸಂಜೆ 5 ಗಂಟೆಯ ಹೊತ್ತಿಗೆ ವೇಗವನ್ನು 16 ಕಿ.ಮೀ.ಗೆ ಹೆಚ್ಚಿಸಿಕೊಂಡಿತ್ತು. ಚಂಡಮಾರುತವು ಭೂ ಪ್ರದೇಶವನ್ನು ಅಪ್ಪಳಿಸುವ ಸಂದರ್ಭದಲ್ಲಿ ಗಾಳಿಯ ವೇಗ ಗಂಟೆಗೆ 60–70 ಕಿ.ಮೀ. ವೇಗದಲ್ಲಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ನೌಕಾಪಡೆ ಮತ್ತು ಭಾರತೀಯ ಕರಾವಳಿ ಗಸ್ತು ಪಡೆ ಕೂಡ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡಗಳ ಜತೆಗೆ ಕೇಂದ್ರ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ತಮಿಳುನಾಡಿನವಿವಿಧ ಭಾಗಗಳಲ್ಲಿ 465 ಆಂಬುಲೆನ್ಸ್‌ಗಳು ಸಿದ್ಧವಾಗಿ ನಿಂತಿವೆ. ‘ನಿವಾರ್‌’ನಿಂದ ಹೆಚ್ಚು ತೊಂದರೆಗೆ ಒಳಗಾಗುವ ಪ್ರದೇಶ ಪುದುಚೇರಿ ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆ ಎಂದು ಗುರುತಿಸಲಾಗಿರುವುದರಿಂದ ಈ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.