ADVERTISEMENT

‘ಸೋಂಕು ಇಲ್ಲದ ಮುಸ್ಲಿಮರಿಗಷ್ಟೇ ಪ್ರವೇಶ’

ಮೀರಠ್‌ನ ಖಾಸಗಿ ಆಸ್ಪತ್ರೆಯಿಂದ ಜಾಹೀರಾತು: ಪೊಲೀಸರಿಂದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 20:15 IST
Last Updated 19 ಏಪ್ರಿಲ್ 2020, 20:15 IST
ಕೊರೊನಾ ಸೋಂಕಿನಿಂದ ಗುಣಮುಖರಾದ ರೋಗಿಗಳಿಗೆ ಶ್ರೀನಗರದಲ್ಲಿ ವೈದ್ಯರು ಅಭಿನಂದಿಸಿದರು.
ಕೊರೊನಾ ಸೋಂಕಿನಿಂದ ಗುಣಮುಖರಾದ ರೋಗಿಗಳಿಗೆ ಶ್ರೀನಗರದಲ್ಲಿ ವೈದ್ಯರು ಅಭಿನಂದಿಸಿದರು.   

ಲಖನೌ: ಕೊರೊನಾ ಸೋಂಕು ಇಲ್ಲ ಎಂದು ದೃಢಪಡಿಸುವ ವರದಿಯನ್ನು ಕಡ್ಡಾಯವಾಗಿ ನೀಡದ ಮುಸ್ಲಿಂ ರೋಗಿಗಳಿಗೆ ಉತ್ತರಪ್ರದೇಶದ ಖಾಸಗಿ ಆಸ್ಪತ್ರೆಯು ಪ್ರವೇಶ ನಿಷೇಧಿಸಿದೆ.

ಮೀರಠ್‌ನಲ್ಲಿರುವ ಖಾಸಗಿ ಆಸ್ಪತ್ರೆಯೊಂದು ಇಂಥ ಕ್ರಮ ಕೈಗೊಂಡಿದೆ. ಗುಜರಾತ್‌ನ ಆಸ್ಪತ್ರೆಯೊಂದು ಈಚೆಗೆ ಹಿಂದೂ ಮತ್ತು ಮುಸ್ಲಿಂ ಕೊರೊನಾ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿರುವ ವರದಿಗಳ ಹಿಂದೆಯೇ ಇಂಥದೊಂದು ಬೆಳವಣಿಗೆ ನಡೆದಿದೆ. ಮೂಲಗಳ ಪ್ರಕಾರ, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಈ ಬೆಳವಣಿಗೆ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ.

ಕ್ಯಾನ್ಸರ್ ರೋಗಕ್ಕೆ ವಿಶೇಷವಾಗಿ ಚಿಕಿತ್ಸೆ ನೀಡಲಿರುವ ಈ ಆಸ್ಪತ್ರೆಯು, ರಾಜ್ಯದ ಪ್ರಮುಖ ಹಿಂದಿ ದೈನಿಕದಲ್ಲಿ ತನ್ನ ಕ್ರಮಕ್ಕೆ ಕಾರಣಗಳನ್ನು ವಿವರಿಸಿ ಜಾಹೀರಾತು ನೀಡಿದೆ.

ADVERTISEMENT

ತಬ್ಲೀಗ್ ಜಮಾತ್‌ನ ಸದಸ್ಯರ ಅನುಚಿತ ವರ್ತನೆಯನ್ನು ಆಸ್ಪತ್ರೆ ಕಾರಣವಾಗಿ ಉಲ್ಲೇಖಿಸಿದೆ. ದೇಶದಲ್ಲಿ ಸೋಂಕು ಹರಡಲು ಇವರೇ ಕಾರಣರು. ತಬ್ಲೀಗ್ ಜಮಾತ್‌ನ ಕೆಲವರು ವೈದ್ಯರು, ನರ್ಸ್‌ಗಳ ಜೊತೆಗೂ ಅನುಚಿತ ವರ್ತನೆ ತೋರಿದ್ದಾರೆ. ಇಂಥ ಪ್ರಕರಣಗಳು ಹೆಚ್ಚುತ್ತಿವೆ. ನಮ್ಮ ಆಸ್ಪತ್ರೆಯಲ್ಲೂ ಇಂಥ ಪ್ರಕರಣಗಳು ನಡೆದಿವೆ ಎಂದು ವಿವರಿಸಲಾಗಿದೆ.

ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳ ನಿವಾಸಿಗಳಲ್ಲದ ಮುಸ್ಲಿಂ ವೈದ್ಯರು, ಜಡ್ಜ್‌ಗಳು, ಪೊಲೀಸರು, ಅಧಿಕಾರಿಗಳು, ಅರೆ ವೈದ್ಯಕೀಯ ಸಿಬ್ಬಂದಿಗೆ ಈ ನಿಷೇಧದ ನಿಯಮವು ಅನ್ವಯವಾಗದು ಎಂದು ಆಸ್ಪತ್ರೆಯು ಸ್ಪಷ್ಟಪಡಿಸಿದೆ. ಈ ಮಧ್ಯೆ, ಪೊಲೀಸರು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಪಿಎಂ ಕೇರ್ಸ್ ನಿಧಿ’ಗೆ ನೆರವು ನೀಡದ ಹಿಂದೂ, ಜೈನ ಸಮುದಾಯದ ಸಿರಿವಂತರನ್ನು ‘ಜಿಪುಣರು’ ಎಂದೂ ಆಸ್ಪತ್ರೆಯ ಜಾಹೀರಾತಿನಲ್ಲಿ ಟೀಕಿಸಲಾಗಿದೆ. ಆದರೆ, ಇದಕ್ಕೆ ಉಭಯ ಸಮುದಾಯಗಳಿಂದ ಆಕ್ರೋಶ ವ್ಯಕ್ತವಾದ ಹಿಂದೆಯೇ ಮತ್ತೊಂದು ಜಾಹೀರಾತು ನೀಡಿರುವ ಆಸ್ಪತ್ರೆಯು ಜಿಪುಣರು ಎಂಬ ಪದ ಬಳಕೆಗಾಗಿ ಕ್ಷಮೆಯಾಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.