ನವದೆಹಲಿ: ಸರ್ಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ನೇಮಕ (ಲ್ಯಾಟರಲ್ ಎಂಟ್ರಿ) ಮಾಡಿಕೊಳ್ಳುವುದರಿಂದ ನಾಗರಿಕ ಸೇವೆ ಅಧಿಕಾರಿಗಳ ನೈತಿಕತೆ ಕುಸಿಯುವುದಿಲ್ಲ. ಇಂತಹ ನೇಮಕಾತಿಗಳು ಈ ಹಿಂದೆಯೂ ನಡೆದಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿ ಬುಧವಾರ ಲಿಖಿತ ಪ್ರಶ್ನೆಗೆ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಉತ್ತರಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಉಲ್ಲೇಖಿಸಿ, ಇವರು ಸಹ ಅಧಿಕಾರಿಯಾಗಿದ್ದವರು. ಅಷ್ಟೇ ಏಕೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಸಹ ಸರ್ಕಾರದ ಉನ್ನತ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕವೇ ನೇಮಕವಾಗಿದ್ದರು. ಇಂತಹ ನೇಮಕಾತಿಗಳಿಂದ ನಾಗರಿಕ ಸೇವಾ ಅಧಿಕಾರಿಗಳ ನೈತಿಕತೆ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರವು ವಿವಿಧ ವಲಯಗಳಲ್ಲಿನ 10 ಜಂಟಿ ಕಾರ್ಯದರ್ಶಿ ಹುದ್ದೆಗಳ ನೇಮಕಾತಿಗೆ ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಭಾವಂತರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಕ್ಷೇತ್ರಗಳಿಗೆ ಹೊಸ ಪ್ರತಿಭೆಗಳನ್ನು ತರುವ ಮತ್ತು ಮಾನವಶಕ್ತಿಯ ಲಭ್ಯತೆಯನ್ನು ವೃದ್ಧಿಸುವ ಉದ್ದೇಶಗಳನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದ್ದಾರೆ.
‘ಲ್ಯಾಟರಲ್ ಎಂಟ್ರಿ ಪದ್ಧತಿಯನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಕಾಲಕಾಲಕ್ಕೆ ನಿರ್ದಿಷ್ಟ ಕೆಲಸಗಳಿಗಾಗಿ ಕೆಲವು ಪ್ರಮುಖ ವ್ಯಕ್ತಿಗಳನ್ನು ನೇಮಕ ಮಾಡಲಾಗಿದೆ. ಮನಮೋಹನ್ ಸಿಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಸೇರಿದಂತೆ ವಿಜಯ್ ಕೇಳ್ಕರ್, ಬಿಮಲ್ ಜಲಾನ್, ಶಂಕರ್ ಆಚಾರ್ಯ, ರಾಕೇಶ್ ಮೋಹನ್, ಅರವಿಂದ್ ವೀರಮಣಿ, ಅರವಿಂದ್ ಪನಾಗರಿಯಾ, ಅರವಿಂದ್ ಸುಬ್ರಮಣಿಯನ್, ವಿದ್ಯಾ ರಾಜೇಶ್ ಕೋಟೆಕಾ, ಪರಮೇಶ್ವರನ್ ಅಯ್ಯರ್ ಮತ್ತು ರಾಮ್ ವಿನಯ್ ಸಾಹಿ ಅವರನ್ನು ಉನ್ನತ ಹುದ್ದೆಗಳಿಗೆ ನೇಮಕ ಮಾಡಲಾಗಿತ್ತು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.