ADVERTISEMENT

ದಿಶಾ ಸಾವಿನ ತನಿಖೆಯಲ್ಲಿ ವಿಶ್ವಾಸವಿದೆ: ಸತೀಶ್ ಸಾಲಿಯಾನ್

ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ಮಾಧ್ಯಮ, ರಾಜಕಾರಣಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಪಿಟಿಐ
Published 6 ಆಗಸ್ಟ್ 2020, 9:00 IST
Last Updated 6 ಆಗಸ್ಟ್ 2020, 9:00 IST
ದಿಶಾ ಸಾಲಿಯಾನ್
ದಿಶಾ ಸಾಲಿಯಾನ್   

ಮುಂಬೈ: ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್‌ ಸಿಂಗ್‌ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್ ಸಾವಿನ ಕುರಿತು ಮುಂಬೈ ಪೊಲೀಸರು ನಡೆಸಿರುವ ತನಿಖೆಯ ಬಗ್ಗೆ ಯಾವುದೇ ಅನುಮಾನವಿಲ್ಲ. ಪ್ರಕರಣದ ತನಿಖೆ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ದಿಶಾ ತಂದೆ ಸತೀಶ್ ಸಾಲಿಯಾನ್‌ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಮುಂಬೈನ ಮಾಲ್ವನಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಿಗೆ (ಎಸಿಪಿ) ಬುಧವಾರ ಬರೆದಿರುವ ಈ ಪತ್ರದಲ್ಲಿ, ’ಮಗಳ ಸಾವಿನ ಕುರಿತು ಮುಂಬೈ ಪೊಲೀಸರು ನಡೆಸುತ್ತಿರುವ ತನಿಖೆ ಕುರಿತ ವಿಶ್ವಾಸ ಮತ್ತು ವಿಧಾನ ಬಗ್ಗೆ ಮಾಧ್ಯಮಗಳು ಪದೇ ಪದೇ ನಮ್ಮ ಕುಟುಂಬವನ್ನು ಪ್ರಶ್ನಿಸುತ್ತಾ, ತುಂಬಾ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈನ ತಮ್ಮ ದಾದರ್ ವಿಳಾಸದಿಂದ ಪತ್ರ ಬರೆದಿರುವ ಸತೀಶ್ ಸಾಲಿಯಾನ್, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಮಗಳ ವಿರುದ್ಧ ಅಸಹ್ಯಕರವಾದ ಸಂದೇಶಗಳನ್ನು ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ವಿಚಾರದಲ್ಲಿತಮ್ಮ ಕುಟುಂಬದವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿರುವ ಮಾಧ್ಯಮದವರು, ರಾಜಕಾರಣಿಗಳು ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿರುವುದಾಗಿ ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ದಿಶಾ ಸಾಲಿಯಾನ್ (28) ಅವರು ಜೂನ್ 8ರಂದು ಎತ್ತರ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದರು. ಈ ಸಂಬಂಧ ಮಾಲ್ವನಿ ಠಾಣೆಯಲ್ಲಿ ಅಪಘಾತ ಸಾವು ಎಂದು ಪ್ರಕರಣ ದಾಖಲಾಗಿತ್ತು. ಇದಾದ ಆರು ದಿನಗಳಲ್ಲಿ (ಜೂ.14) ನಟ ಸುಶಾಂತ್ ಸಿಂಗ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.