ADVERTISEMENT

ಪೌರತ್ವ: ಸಿಂಧುತ್ವ ಪರಿಶೀಲನೆಗೆ ಒಪ್ಪಿಗೆ

ಕಾಯ್ದೆಗೆ ತಡೆ ನೀಡಲು ‘ಸುಪ್ರೀಂ’ ನಕಾರ l ಜ. 22ರಂದು ವಿಚಾರಣೆ l ಕಾಯ್ದೆಯನ್ನು ಪ್ರಶ್ನಿಸಿ 60 ಅರ್ಜಿ ಸಲ್ಲಿಕೆ

ಪಿಟಿಐ
Published 18 ಡಿಸೆಂಬರ್ 2019, 19:42 IST
Last Updated 18 ಡಿಸೆಂಬರ್ 2019, 19:42 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಭಾರಿ ವಿವಾದ, ಪ್ರತಿಭಟನೆ ಮತ್ತು ಸಂಘರ್ಷಕ್ಕೆ ಕಾರಣವಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ಬುಧವಾರ ಒಪ್ಪಿಗೆ ಸೂಚಿಸಿದೆ. ಆದರೆ, ಕಾಯ್ದೆಯ ಜಾರಿಗೆ ತಡೆ ನೀಡಲು ನಿರಾಕರಿಸಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದು ಈ ಕಾಯ್ದೆಯ ಉದ್ದೇಶ. ಕಾಯ್ದೆಯನ್ನು ಪ್ರಶ್ನಿಸಿ 60 ಅರ್ಜಿಗಳು ಸಲ್ಲಿಕೆಯಾಗಿವೆ. ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ತ್ರಿಸದಸ್ಯ ಪೀಠವು ಕೇಂದ್ರಕ್ಕೆ ನೋಟಿಸ್‌ ನೀಡಿದೆ. ಜನವರಿ 22ರಂದು ವಿಚಾರಣೆ ಆರಂಭವಾಗಲಿದೆ.

ಮುಸ್ಲಿಂ ಲೀಗ್‌, ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಮುಂತಾದವರು ಅರ್ಜಿದಾರರಲ್ಲಿ ಸೇರಿದ್ದಾರೆ. ಕಾಯ್ದೆಯ ಉದ್ದೇಶ ಮತ್ತು ಸಂಬಂಧಿಸಿದ ಇತರ ವಿಚಾರಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸ
ಬೇಕು ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಕೋರಿದ್ದರು. ಈ ವಿಚಾರದಲ್ಲಿ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು.

ADVERTISEMENT

ಕಾಯ್ದೆಗೆ ತಡೆ ನೀಡಬೇಕು ಎಂದು ಕೆಲವು ಅರ್ಜಿದಾರರ ವಕೀಲರು ಕೋರಿದರು. ಆದರೆ, ವೇಣುಗೋಪಾಲ್‌ ಇದನ್ನು ವಿರೋಧಿಸಿದರು. ಅಧಿಸೂಚನೆ ಪ್ರಕಟವಾದ ಬಳಿಕ ಕಾಯ್ದೆಗೆ ತಡೆ ನೀಡಲು ಅವಕಾಶ ಇಲ್ಲ ಎಂದು ನಾಲ್ಕು ತೀರ್ಪುಗಳು ಬಂದಿವೆ ಎಂದರು.

ಕಾಯ್ದೆಯ ಅಡಿಯಲ್ಲಿ ನಿಯಮ ರೂಪಿಸುವಿಕೆಯಂತಹ ಹಲವು ಕೆಲಸಗಳು ಇನ್ನೂ ಆಗಿಲ್ಲ.ಕಾಯ್ದೆಗೆ ಈಗಲೇ ತಡೆ ಕೋರುವ ಅಗತ್ಯ ಇಲ್ಲ ಎಂದು ಕೆಲ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಜೀವ್‌ ಧವನ್‌ ಹೇಳಿದರು.

ತಡೆ ಕೋರುವುದಕ್ಕೆ ಸಂಬಂಧಿಸಿದ ವಾದ–ಪ್ರತಿವಾದಗಳನ್ನು ಜನವರಿ 22 ರಂದು ಮಂಡಿಸಲು ಪೀಠ ಹೇಳಿತು.

ಎಲ್ಲಿ, ಏನು?

*ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಕಾರ್ಯಕರ್ತರು, ಕೆಲವು ಉಪನ್ಯಾಸಕರು ಸೇರಿಕೊಂಡು ಕಾಯ್ದೆಯ ಪರವಾಗಿ ಬುಧವಾರ ಮೆರವಣಿಗೆ ನಡೆಸಿದ್ದಾರೆ

*ಕೇರಳದ ತ್ರಿಶೂರ್‌ನಲ್ಲಿ ಕಾಯ್ದೆಯ ಪರವಾಗಿ ವಿಚಾರ ಸಂಕಿರಣ ಏರ್ಪಡಿಸಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಸಿಪಿಎಂ ಮತ್ತು ಎಸ್ಎಫ್‌ಐಯವರು ಎನ್ನಲಾದ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಮೂವರು ಗಾಯಗೊಂಡಿದ್ದಾರೆ

*ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಸ್ಥಳಕ್ಕೆ ಭೇಟಿನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ

*ಪ್ರತಿಭಟನೆ ನಡೆದ ರಾಜ್ಯಗಳಲ್ಲಿ ಇಂಟರ್‌ನೆಟ್‌ ಸೇವೆ ರದ್ದು ಮಾಡಿರುವ ಭಾರತದ ಕ್ರಮವನ್ನು ಚೀನಾ ಪ್ರಶಂಸಿಸಿದೆ.

6 ವರ್ಷದಲ್ಲಿ 4,000 ಮಂದಿಗೆ ಪೌರತ್ವ

ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಸುಮಾರು ನಾಲ್ಕು ಸಾವಿರ ಜನರಿಗೆ ಕಳೆದ ಆರು ವರ್ಷಗಳಲ್ಲಿ ಪೌರತ್ವ ನೀಡಲಾಗಿದೆ. ಅವರಲ್ಲಿ ನೂರಾರು ಮಂದಿ ಮುಸ್ಲಿಮರಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನದ 2,830, ಅಫ್ಗಾನಿಸ್ತಾನದ 912 ಮತ್ತು ಬಾಂಗ್ಲಾದೇಶದ 182 ಮಂದಿಗೆ ಪೌರತ್ವ ನೀಡಲಾಗಿದೆ. ಪೌರತ್ವದ ಅರ್ಹತೆಯ ಮಾನದಂಡಗಳನ್ನು ಪೂರೈಸಿದರೆ ಈ ರೀತಿಯ ಪೌರತ್ವ ನೀಡಿಕೆ ಮುಂದುವರಿಯಲಿದೆ ಎಂದೂ ಅವರು ತಿಳಿಸಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಭಾರಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿ ಈ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.