
ಲಖನೌ: ‘ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಮೀಸಲಿಡುವ ಅನುದಾನವನ್ನು ನಿರಂತರವಾಗಿ ಕಡಿಮೆ ಮಾಡುತ್ತಿದೆ. ಹೆಸರು ಬದಲಾವಣೆಯು ಯೋಜನೆಯನ್ನು ನಿಲ್ಲಿಸುವ ಹುನ್ನಾರದ ಭಾಗ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
‘ನರೇಗಾ ಯೋಜನೆಯ ಹೆಸರು ಬದಲಿಸುವುದಷ್ಟೇ ಬಿಜೆಪಿಯ ಉದ್ದೇಶವಲ್ಲ, ಯೋಜನೆಗೆ ತಿಲಾಂಜಲಿ ಇಡುವುದು ಅದರ ಗುರಿ. ಯಾರೊಬ್ಬರೂ ಜೀವನೋಪಾಯ ಕಂಡುಕೊಳ್ಳುವುದನ್ನು ಆ ಪಕ್ಷ ಸಹಿಸುವುದಿಲ್ಲ’ ಎಂದು ಬುಧವಾರ ದೂರಿದ್ದಾರೆ.
‘ಹೆಸರು ಬದಲಾಯಿಸಿ ಸಾಧಿಸುವುದಾದರೂ ಏನು? ವಾಸ್ತವದಲ್ಲಿ ನಿಧಾನವಾಗಿ ಯೋಜನೆಯನ್ನು ಅಂತ್ಯಗೊಳಿಸುವುದು ಅದರ ರಹಸ್ಯ ಪಿತೂರಿ’ ಎಂದು ‘ಎಕ್ಸ್’ ಪೋಸ್ಟ್ನಲ್ಲಿ ಹೇಳಿದ್ದಾರೆ.
‘ಬಿಜೆಪಿ ಸರ್ಕಾರವು ಒಂದೆಡೆ ಯೋಜನೆಗೆ ಮೀಸಲಿಡುವ ಅನುದಾನವನ್ನು ಕಡಿಮೆ ಮಾಡಿದೆ. ಇನ್ನೊಂದೆಡೆ ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹೇರುತ್ತಿದೆ. ಜಿಎಸ್ಟಿ ವ್ಯವಸ್ಥೆಯಡಿ ರಾಜ್ಯಗಳಿಗೆ ನೀಡಬೇಕಾದ ಪಾಲನ್ನೂ ನೀಡದೆ, ರಾಜ್ಯಗಳ ಖಜಾನೆಯನ್ನು ಕೇಂದ್ರ ಸರ್ಕಾರವು ಬರಿದುಮಾಡಿದೆ. ಹೀಗಿದ್ದಾಗ ನರೇಗಾ ಯೋಜನೆಗೆ ರಾಜ್ಯಗಳು ಹೆಚ್ಚುವರಿ ಹಣ ಹೊಂದಿಸುವುದು ಕಷ್ಟ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.