ನವದೆಹಲಿ: ಭಾರಿ ವಿವಾದಕ್ಕೆ ಗುರಿಯಾಗಿದ್ದ ಸರಿ-ಬೆಸ ಸಂಖ್ಯೆಯ ವಾಹನಗಳನ್ನು ದಿನ ಬಿಟ್ಟು ದಿನ ರಸ್ತೆಗೆ ಇಳಿಸುವನಿಯಮವನ್ನು ಮತ್ತೊಮ್ಮೆ ಜಾರಿಗೆ ತರಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ನವೆಂಬರ್ 4 ರಿಂದ 15ರ ಒಳಗೆ ಈ ನಿಯಮವನ್ನು ಜಾರಿಗೆ ತರಲಾಗುವುದು. ಇದು ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಅನುಸರಿಸುತ್ತಿರುವ ಏಳು ಅಂಶಗಳ ಕ್ರಿಯಾ ಯೋಜನೆಯಲ್ಲಿಒಂದು ಎಂದು ಅವರು ಹೇಳಿದ್ದಾರೆ.
ಈ ನಿಯಮವನ್ನುಹಿಂದೆ ಜಾರಿಗೆ ತಂದ ಸಮಯದಲ್ಲಿ ಕಂಡು ಬಂದಲೋಪಗಳನ್ನು ಈ ಬಾರಿ ಪರಿಗಣಿಸಿದ್ದೇವೆ ಎಂದಷ್ಟೇ ಹೇಳಿದ್ದಾರೆ. ಆದರೆ, ಯಾವ ಲೋಪಗಳನ್ನು ಸರಿಪಡಿಸಿಕೊಂಡಿದ್ದಾರೆ ಎಂಬುದನ್ನು ಮಾತ್ರ ಹೇಳಿಲ್ಲ.ಕಳೆದ ಬಾರಿ ಜಾರಿಗೆ ತಂದ ವೇಳೆ ಮಹಿಳೆಯರು, ಅತಿಗಣ್ಯವ್ಯಕ್ತಿಗಳು, ಸಿಎನ್ಜಿ ವಾಹನಗಳು, ವಿಕಲಚೇತನರು, ದ್ವಿಚಕ್ರವಾಹನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲಎಂದು ತಿಳಿಸಲಾಗಿತ್ತು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ಹಲವು ಅಧ್ಯಯನಗಳ ಪ್ರಕಾರ, ನವದೆಹಲಿ ಅತಿ ಹೆಚ್ಚು ವಾಯುಮಾಲಿನ್ಯದಿಂದ ಕೂಡಿರುವ ನಗರ ಎಂದು ಬಹಿರಂಗಗೊಂಡಿದೆ. ವಾಹನಗಳು, ಕೈಗಾರಿಕಾ ಪ್ರದೇಶಗಳಿಂದ ಹೊರಸೂಸುವ ಮಲಿನ ಗಾಳಿ, ನಿರ್ಮಾಣ ಹಂತದ ಕಟ್ಟಡಗಳಿಂದ ಬರುತ್ತಿರುವ ಧೂಳು, ಮೈದಾನದಲ್ಲಿ ಬೃಹತ್ ಕಸದ ರಾಶಿಗೆ ಬೆಂಕಿ ಹಾಕುವುದು ವಾಯುಮಾಲಿನ್ಯ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಇದನ್ನು ನಿಯಂತ್ರಿಸಲು ನಂಬರ್ ಪ್ಲೇಟ್ನಲ್ಲಿ ಬೆಸ ಸಂಖ್ಯೆಇರುವವಾಹನಗಳನ್ನು ಒಂದು ದಿನ ರಸ್ತೆಗೆ ಇಳಿಸಿದರೆ, ಸಮ ಸಂಖ್ಯೆಯ ವಾಹನಗಳನ್ನು ಮತ್ತೊಂದು ದಿನ ರಸ್ತೆಗೆ ಇಳಿಸುವುದು. ಬೆಸ ಸಂಖ್ಯೆಯ ವಾಹನಗಳು ರಸ್ತೆಗೆ ಇಳಿದ ದಿನ ಸಮ ಸಂಖ್ಯೆಯ ವಾಹನಗಳನ್ನು ಮನೆಯಲ್ಲಿಯೇ ನಿಲ್ಲಿಸಬೇಕು. ಸಮ ಸಂಖ್ಯೆಯ ವಾಹನಗಳು ರಸ್ತೆಗೆ ಇಳಿದ ದಿನ ಬೆಸ ಸಂಖ್ಯೆಯ ವಾಹನಗಳನ್ನು ಮಾಲೀಕರು ರಸ್ತೆಗೆ ಇಳಿಸಬಾರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.