ಕೊರಾಪುಟ್ (ಒಡಿಶಾ): ಒಂದೇ ಕುಲದಲ್ಲಿ ಮದುವೆಯಾಗಿದ್ದಕ್ಕೆ ನವದಂಪತಿಯನ್ನು ಮರದ ನೇಗಿಲಿಗೆ ಕಟ್ಟಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ನಡೆದಿದೆ.
ಬುಡಕಟ್ಟು ಜನಾಂಗದವರೇ ಹೆಚ್ಚು ವಾಸಿಸುವ ನಾರಾಯಣಪಟ್ಟಣ ಗ್ರಾಮದಲ್ಲಿ ಘಟನೆ ನಡೆದಿದೆ. ದಂಪತಿಯನ್ನು ನೇಗಿಲಿಗೆ ಕಟ್ಟಿ ಒತ್ತಾಯಪೂರ್ವಕವಾಗಿ ಗ್ರಾಮದಾದ್ಯಂತ ಮೆರವಣಿಗೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪ್ರೀತಿಸಿ ಮದುವೆಯಾದ ಜೋಡಿ ಒಂದೇ ಕುಲದವರಾಗಿದ್ದಾರೆ. ಇಬ್ಬರು ಒಂದೇ ಕುಲದವರು ಮದುವೆಯಾಗುವುದು ಬುಡಕಟ್ಟು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಅಂತಹ ಸಂಬಂಧಗಳು ದುರದೃಷ್ಟವನ್ನು ತರುತ್ತವೆ. ಅದರಲ್ಲೂ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಶುದ್ಧೀಕರಿಸುವ ಭಾಗವಾಗಿ ಈ ಶಿಕ್ಷೆ ನೀಡಲಾಗಿತ್ತು. ಶುದ್ಧೀಕರಣದ ನಂತರ ದಂಪತಿಯನ್ನು ವರನ ಕುಟುಂಬದೊಂದಿಗೆ ವಾಸಿಸಲು ಅವಕಾಶ ನೀಡಲಾಯಿತು’ ಎಂದು ಗ್ರಾಮಸ್ಥರೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ದಂಪತಿ ಮೆರವಣಿಗೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ತನಿಖಾ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.