ಬ್ರಹಂಪುರ: ಒಡಿಶಾದ ಬ್ರಹಂಪುರ ವಿಶ್ವವಿದ್ಯಾಲಯದ ಕುಲಪತಿ ಗೀತಾಂಜಲಿ ದಾಸ್ ಅವರಿಗೆ ‘ಡಿಜಿಟಲ್ ಅರೆಸ್ಟ್’ ಮೂಲಕ ₹14 ಲಕ್ಷ ವಂಚನೆ ಮಾಡಿದ ಪ್ರಕರಣ ಸಂಬಂಧ ಇಬ್ಬರನ್ನು ಗುಜರಾತ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು.
ಬಂಧಿತರನ್ನು ಭೂತಯ್ಯ ಜೇನಿಲ್ ಜಯಸುಖ್ಭಾಯಿ (23) ಮತ್ತು ವಿಶ್ವಜೀತ್ ಸಿನ್ಹಾ ಗೋಹಿಲ್ (21) ಎಂದು ಗುರುತಿಸಲಾಗಿದೆ ಎಂದರು.
ಆರೋಪಿಗಳು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಸೋಗಿನಲ್ಲಿ ಗೀತಾಂಜಲಿ ಅವರನ್ನು ಸಂಪರ್ಕಿಸಿ, ‘ನೀವು ಹಣ ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದೀರಿ ಎಂಬ ಮಾಹಿತಿ ಇದೆ’ ಎಂದು ಹೇಳಿದ್ದರು. ಫೆಬ್ರುವರಿ 14ರಿಂದ 22ರವರೆಗೆ ‘ಡಿಜಿಟಲ್ ಅರೆಸ್ಟ್’ ಮಾಡಿಕೊಂಡಿದ್ದರು. ತನಿಖೆಯ ಉದ್ದೇಶದಿಂದ ತಮ್ಮ ಬಳಿ ಇರುವ ಹಣವನ್ನು ನೀಡುವಂತೆ ಹೇಳಿದ್ದರು. ಅದರಂತೆ ಗೀತಾಂಜಲಿ ಅವರು ₹14 ಲಕ್ಷ ಹಣವನ್ನು ಆರೋಪಿಗಳಿಗೆ ವರ್ಗಾವಣೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.
ಬಳಿಕ ಆರೋಪಿಗಳು ₹80,000 ಹಣವನ್ನು ವಾಪಸ್ ನೀಡಿ, ಪರಿಶೀಲನೆ ಬಳಿಕ ಉಳಿದ ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದರು. ಉಳಿದ ಹಣ ವಾಪಸ್ ಬರದಿದ್ದಾಗ ಫೆಬ್ರುವರಿ 24ರಂದು ಗೀತಾಂಜಲಿ ಅವರು ದೂರು ನೀಡಿದ್ದರು.
‘ಆರೋಪಿಗಳು ದೇಶದ ವಿವಿಧ ಭಾಗಗಳಲ್ಲಿ ಈ ರೀತಿ ವಂಚನೆ ಮಾಡುವ ಗ್ಯಾಂಗ್ನ ಭಾಗವಾಗಿದ್ದು, ವಂಚಕರ ಜಾಲ ಪತ್ತೆಯಾಗಿ ತನಿಖೆಯು ಪ್ರಗತಿಯಲ್ಲಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಸರವಣ ವಿವೇಕ್ ಎಂ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.