ಲಖನೌ: ತಂದೆಯ ಗೊರಕೆಯ ಅಭ್ಯಾಸದಿಂದ ಬೇಸತ್ತ ಮಗನೊಬ್ಬ ತಂದೆಯನ್ನೇ ಹತ್ಯೆ ಮಾಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.
ಕೃಷಿಕ ರಾಮ್ಸ್ವರೂಪ್ (65) ಹತ್ಯೆಗೀಡಾದವರು.
ಸೌಧಾ ಗ್ರಾಮದ ನಿವಾಸಿ ರಾಮ್ ಸ್ವರೂಪ್ ಅವರಿಗೆ ರಾತ್ರಿ ನಿದ್ದೆಯಲ್ಲಿ ಗೊರಕೆ ಹೊಡೆಯುವ ಅಭ್ಯಾಸವಿತ್ತು. ತಂದೆಯ ಗೊರಕೆಯ ಶಬ್ದದಿಂದಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ರಾಮ್ ಸ್ವರೂಪ್ ಅವರ ಹಿರಿಯ ಮಗ ನವೀನ್ ಕುಮಾರ್ ಆಗಾಗ್ಗೆ ತಂದೆಯ ಜತೆ ವಾಗ್ವಾದ ಮಾಡುತ್ತಿದ್ದ.
ಮಂಗಳವಾರ ನವೀನ್ ಅವರ ತಾಯಿ ಮತ್ತು ಸಹೋದರ ಸಂಬಂಧಿಕರ ಮನೆಗೆ ತೆರಳಿದ್ದಾಗ ತಂದೆ ಮಗನ ನಡುವೆ ಗೊರಕೆ ವಿಚಾರಕ್ಕೆ ವಾಗ್ವಾದ ನಡೆದಿದೆ. ಸಿಟ್ಟಿನ ಭರದಲ್ಲಿ ಮಗ ನವೀನ್ ತಂದೆ ರಾಮ್ ಸ್ವರೂಪ್ ಅವರಿಗೆ ಲಾಠಿಯಿಂದ ಹೊಡೆದಿದ್ದಾನೆ. ರಾಮ್ ಅವರ ದನಿ ಕೇಳಿ ಅಕ್ಕಪಕ್ಕದವರು ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಎಸಗಿದ ನವೀನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.