ನವದೆಹಲಿ:ಸದೃಢವಾದ ಹಾಗೂ ಭಾವನಾತ್ಮಕವಾಗಿ ಒಂದಾದ ಭಾರತವನ್ನು ನಿರ್ಮಿಸುವ ಕಾರ್ಯಕ್ಕೆ ಒತ್ತು ನೀಡಬೇಕು. ಈ ಕಾರ್ಯ ಆಂದೋಲನ ರೀತಿಯಲ್ಲಿ ನಡೆಯಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿದ್ದ ‘ಕ್ವಿಟ್ ಇಂಡಿಯಾ’ ಚಳವಳಿಯ 78ನೇ ವಾರ್ಷಿಕೋತ್ಸವದ ಅಂಗವಾಗಿ ಅವರು ಫೇಸ್ಬುಕ್ನಲ್ಲಿ ಭಾನುವಾರ ಲೇಖನವೊಂದನ್ನು ಪ್ರಕಟಿಸಿದ್ದಾರೆ.
1000 ಇಸವಿಯಿಂದ 1947ರ ವರೆಗಿನ ಇತಿಹಾಸದ ಘಟನೆಗಳನ್ನು ಮೆಲುಕು ಹಾಕಿರುವ ಅವರು, ವಿದೇಶಿಯರ ಆಕ್ರಮಣ, ವಸಾಹತುಶಾಹಿ ಕಾಲಘಟ್ಟದ ಘಟನೆಗಳ ವಿವರಗಳನ್ನೂ ಹಂಚಿಕೊಂಡಿದ್ದಾರೆ.
ಕಳೆದ ಎರಡು ಶತಮಾನಗಳ ಅವಧಿಯಲ್ಲಿ ಸಾಂಸ್ಕೃತಿಕವಾಗಿ ದೇಶವು ಭಾರಿ ಬೆಲೆ ತೆರಬೇಕಾಯಿತು. ದೇಶ ಆರ್ಥಿಕವಾಗಿಯೂ ಶೋಷಣೆಗೆ ಒಳಗಾಯಿತು ಎಂದು ವಿವರಿಸಿದ್ದಾರೆ.
‘ದೇಶವಾಸಿಗಳಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ದೇಶವು ಸತತವಾಗಿ ಶೋಷಣೆಗೆ ಒಳಗಾಗಬೇಕಾಯಿತು. ಇತಿಹಾಸದ ಈ ಘಟನೆಗಳಿಂದ ಭಾರತೀಯರು ಪಾಠ ಕಲಿಯವುದು ಅವಶ್ಯ. ನಮ್ಮ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಪರಂಪರೆಯನ್ನು ಉಳಿಸಿಕೊಳ್ಳುವ ಜೊತೆಜೊತೆಗೆ ನಾವೆಲ್ಲಾ ಭಾರತೀಯರು ಎಂಬ ಅರಿವನ್ನು ಬೆಳೆಸಿಕೊಳ್ಳಬೇಕು’ ಎಂದೂ ಅವರು ಲೇಖನದಲ್ಲಿ ಹೇಳಿದ್ದಾರೆ.
‘2022ರಲ್ಲಿ ದೇಶವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತದೆ. ಅಷ್ಟರೊಳಗೆ ದೇಶದಲ್ಲಿನ ಭ್ರಷ್ಟಾಚಾರ, ಬಡತನ, ಅನಕ್ಷರತೆ, ಅಸಮಾನತೆ ಹಾಗೂ ಎಲ್ಲ ಬಗೆಯ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡುವುದಾಗಿ ಪ್ರತಿಯೊಬ್ಬ ಭಾರತೀಯರು ಪ್ರತಿಜ್ಞೆ ಮಾಡಬೇಕು’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.