ನಾಸಿಕ್ (ಮಹಾರಾಷ್ಟ್ರ): ಈರುಳ್ಳಿ ಬೆಲೆ ಕುಸಿತದಿಂದ ಕಂಗೆಟ್ಟ ನಾಸಿಕ್ ಜಿಲ್ಲೆಯ ರೈತರೊಬ್ಬರು ಅದರಿಂದ ದೊರೆತ ಅತ್ಯಲ್ಪ ಮೊತ್ತವನ್ನು ಮುಖ್ಯಮಂತ್ರಿಗೆ ಕಳುಹಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಯೇವಲಾ ತಾಲ್ಲೂಕಿನ ಅಂದರ್ಸುಲ್ ಗ್ರಾಮದ ರೈತ ಚಂದ್ರಕಾಂತ್ ಭಿಕಾನ್ ದೇಶಮುಖ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ₹216 ಅನ್ನು ಮನಿ ಆರ್ಡರ್ ಮೂಲಕ ಕಳುಹಿಸಿ ಗಮನಸೆಳೆದಿದ್ದಾರೆ.
ಡಿಸೆಂಬರ್ 5ರಂದು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆದ ಹರಾಜಿನಲ್ಲಿ 545 ಕೆ.ಜಿ. ಈರುಳ್ಳಿಯನ್ನು ಚಂದ್ರಕಾಂತ್ ಮಾರಾಟ ಮಾಡಿದ್ದರು. ಆದರೆ, ಪ್ರತಿ ಕೆ.ಜಿ.ಗೆ ದೊರೆತದ್ದು ಕೇವಲ 51 ಪೈಸೆ ಮಾತ್ರ. ಎಪಿಎಂಸಿ ಶುಲ್ಕ ಕಡಿತ ಮಾಡಿದ ಬಳಿಕ ಚಂದ್ರಕಾಂತ್ಗೆ ದೊರೆತದ್ದು ₹216.
‘ನಮ್ಮ ಊರಲ್ಲಿ ಬರ ಇದೆ. ಇಷ್ಟು ಕಡಿಮೆ ಆದಾಯದಲ್ಲಿ ನಾನು ಕುಟುಂಬ ನಿರ್ವಹಣೆ ಹೇಗೆ ಮಾಡಲಿ. ಸಾಲವನ್ನು ಹೇಗೆ ಮರುಪಾವತಿಸಲಿ. ನಾನು ಬೆಳೆದ ಈರುಳ್ಳಿ ಉತ್ತಮ ಗುಣಮಟ್ಟದಿಂದ ಕೂಡಿದ್ದರೂ ಬೆಲೆ ಸಿಗಲಿಲ್ಲ. ಹೀಗಾಗಿ, ಈ ಹಣವನ್ನು ಮುಖ್ಯಮಂತ್ರಿಗೆ ಕಳುಹಿಸಿ ಪ್ರತಿಭಟನೆವ್ಯಕ್ತಪಡಿಸಿರುವೆ’ ಎಂದು ಚಂದ್ರಕಾಂತ್ ಸುದ್ದಿಗಾರರಿಗೆ ತಿಳಿಸಿದರು.
ಇದೇ ರೀತಿ ಇತ್ತೀಚೆಗೆ ನಾಸಿಕ್ ಜಿಲ್ಲೆಯ ರೈತ ಸಂಜಯ್ ಅವರು 750 ಕೆ.ಜಿ. ಈರುಳ್ಳಿ ಮಾರಾಟದಿಂದ ದೊರೆತ ₹1,064 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.