ಶ್ರೀನಗರ: ಅಮರನಾಥ ಯಾತ್ರೆಯ ಪ್ರಸಕ್ತ ವರ್ಷದ ಆನ್ಲೈನ್ ನೋಂದಣಿ ಪ್ರಕ್ರಿಯೆಯು ಇದೇ 15ರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ನ ಆಯ್ದ446 ಶಾಖೆಗಳಲ್ಲಿ ಪ್ರಾರಂಭವಾಗಲಿದೆ.
‘ಬಾಲ್ತಾಲ್ ಮತ್ತು ಚಂದನ್ವಾರಿ ಮಾರ್ಗಗಳಿಗೆ ಏಕಕಾಲದಲ್ಲಿ ನೋಂದಣಿ ಶುರುವಾಗಲಿದೆ. ಈ ವರ್ಷದ ತೀರ್ಥಯಾತ್ರೆ ಕೈಗೊಳ್ಳಲು ಬಯಸುವ ಯಾತ್ರಿಗಳು ದೇಶದಾದ್ಯಂತ ನಿಗದಿಪಡಿಸಿದ 446 ಬ್ಯಾಂಕ್ ಶಾಖೆಗಳ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು’ ಎಂದು ಅಮರನಾಥ ದೇಗುಲ ಮಂಡಳಿಯ (ಎಸ್ಎಎಸ್ಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತೀಶ್ವರ್ ಕುಮಾರ್ ತಿಳಿಸಿದ್ದಾರೆ.
ಯಾತ್ರಿಕರು URL: www.jksasb.nic.inಗೆ ಭೇಟಿ ನೀಡಿ, REGISTER ಕ್ಲಿಕ್ ಮಾಡಬೇಕು. ನಂತರ ಅನುಸರಿಸಬೇಕಾದ ಕ್ರಮಗಳಿಗೆ ಯಾತ್ರಿ ಮಾರ್ಗದರ್ಶನ ನೀಡಲಿದೆ. ಆನ್ಲೈನ್ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ತಮ್ಮ ಭಾವಚಿತ್ರ ಮತ್ತು ಆರೋಗ್ಯ ಪ್ರಮಾಣಪತ್ರವನ್ನು (ಸಿಎಚ್ಸಿ) ಕಡ್ಡಾಯ ಲಗತ್ತಿಸಬೇಕು. ಮಾರ್ಚ್ 15ರ ನಂತರ ನೀಡಲಾದ ಆರೋಗ್ಯ ಪ್ರಮಾಣಪತ್ರಗಳು ಮಾತ್ರ ಪರಿಗಣಿಸಲಾಗುತ್ತದೆ.ಆನ್ಲೈನ್ ನೋಂದಣಿಗೆ ಯಾತ್ರಿಗಳು ಅನುಸರಿಸಬೇಕಾದ ಕ್ರಮಗಳನ್ನು ಮಂಡಳಿಯ ವೆಬ್ಸೈಟ್ www.shriamarnathjishrine.comನಲ್ಲಿ ಗಮನಿಸಬಹುದು.
ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ 3,888 ಮೀಟರ್ ಎತ್ತರದ ಅಮರನಾಥ ಗುಹೆಯ ದೇಗುಲದಲ್ಲಿರುವ ಹಿಮದ ಶಿವಲಿಂಗ ದರ್ಶನದ 56 ದಿನಗಳ ಯಾತ್ರೆಯು ಜೂನ್ 28ರಂದು ಪ್ರಾರಂಭವಾಗಲಿದೆ. ರಕ್ಷಾ ಬಂಧನದ ದಿನವಾದ ಆಗಸ್ಟ್ 22ರಂದು ಮುಕ್ತಾಯಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.