ADVERTISEMENT

ಕಾಶ್ಮೀರ ಪಂಡಿತರಷ್ಟೇ ವಲಸೆ ಹೋಗಿಲ್ಲ: ಒಮರ್‌ ಅಬ್ದುಲ್ಲಾ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 16:15 IST
Last Updated 18 ಮಾರ್ಚ್ 2022, 16:15 IST

ಶ್ರೀನಗರ: ‘1990ರ ದಶಕದಲ್ಲಿ ಕಾಶ್ಮೀರ ಕಣಿವೆಯನ್ನು ತೊರೆದು ಹೋದವರು ಕೇವಲ ಕಾಶ್ಮೀರ ಪಂಡಿತರಷ್ಟೇ ಅಲ್ಲ. ಇಲ್ಲಿನ ಹಲವು ಮುಸ್ಲಿಮರು ಹಾಗೂ ಸಿಖ್ಖರು ಕೂಡ ವಲಸೆ ಹೋಗಿದ್ದು, ಅವರಿನ್ನೂ ಕಾಶ್ಮೀರದತ್ತ ಮರಳಿ ಬಂದಿಲ್ಲ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತಿಳಿಸಿದರು.

ಕುಲ್ಗಾಂನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಿ ಕಾಶ್ಮೀರ ಫೈಲ್ಸ್‌’ ಸಿನಿಮಾದಲ್ಲಿ ಸಾಕಷ್ಟು ಸುಳ್ಳುಗಳನ್ನು ತೋರಿಸಲಾಗಿದೆ . ಜಮ್ಮು ಮತ್ತು ಕಾಶ್ಮೀರದಲ್ಲಿ 1990ರಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಸರ್ಕಾರ ಅಧಿಕಾರದಲ್ಲಿತ್ತು ಎಂದು ಹೇಳಿರುವುದು ಬಹುದೊಡ್ಡ ಸುಳ್ಳು. ಈ ವೇಳೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವಿದ್ದು, ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್‌ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು’ ಎಂದು ಅವರು ಸ್ಪಷ್ಟಪಡಿಸಿದರು.

‘ದಿ ಕಾಶ್ಮೀರ ಫೈಲ್ಸ್‌’ ಚಿತ್ರವನ್ನು ಸತ್ಯ ಘಟನೆಗಳ ಆಧಾರಿತ ಸಿನಿಮಾ ಎಂದು ಹೇಳಿ ಸುಳ್ಳುಗಳನ್ನು ತೋರಿಸಲಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದಕರು ಕಾಶ್ಮೀರ ಪಂಡಿತರಷ್ಟೇ ಅಲ್ಲದೇ ಮುಸ್ಲಿಮರು ಹಾಗೂ ಸಿಖ್ಖರನ್ನು ಕೊಂದಿದ್ದಾರೆ. ಆದರೆ ಸಿನಿಮಾದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಂದ ತೊಂದರೆಗೆ ಒಳಗಾದ ಮುಸ್ಲಿಂ ಮತ್ತು ಸಿಖ್ಖರ ತ್ಯಾಗವನ್ನು ಮರೆಮಾಚಲಾಗಿದೆ. ಈ ಸತ್ಯವನ್ನು ಯಾಕೆ ಹೇಳಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಕಾಶ್ಮಿರ ಪಂಡಿತರು ವಲಸೆ ಹೋಗಿದ್ದು ಕಾಶ್ಮೀರತನಕ್ಕೆ ದೊಡ್ಡ ಕಪ್ಪುಚುಕ್ಕೆ. ಇದಕ್ಕೆ ವಿಷಾದವಿದೆ. ಆದರೆ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷವು ಅಂದಿನಿಂದಲೂ ಅವರನ್ನು ಮರಳಿ ಸುರಕ್ಷಿತವಾಗಿ ಕರೆತರಲು ಪ್ರಯತ್ನ ನಡೆಸುತ್ತಲೇ ಇದೆ. ಆದರೆ ‘ದಿ ಕಾಶ್ಮೀರ ಫೈಲ್ಸ್‌’ ಚಿತ್ರದಿಂದ ನಮ್ಮ ಯೋಜನೆಗಳಿಗೆ ಹಿನ್ನಡೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.