
ಹಿಂಡನ್: ‘ಆಕ್ರಮಣಕಾರಿ ವಾಯು ದಾಳಿಯ ಮೂಲಕ ಕೆಲವೇ ದಿನಗಳಲ್ಲಿ ಸೇನಾ ಕಾರ್ಯಾಚರಣೆಯ ಫಲಿತಾಂಶವನ್ನು ಹೇಗೆ ನಿರ್ಧರಿಸಬಹುದು ಎನ್ನುವುದನ್ನು ಭಾರತೀಯ ವಾಯುಪಡೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ವಿಶ್ವದ ಎದುರು ತೆರೆದಿಟ್ಟಿದೆ’ ಎಂದು ಭಾರತೀಯ ವಾಯು ಪಡೆ ಮುಖ್ಯಸ್ಥ ಎ.ಪಿ.ಸಿಂಗ್ ಹೇಳಿದ್ದಾರೆ.
ಬುಧವಾರ ಹಿಂಡನ್ ವಾಯುನೆಲೆಯಲ್ಲಿ ನಡೆದ 93ನೇ ವಾಯುಪಡೆ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ ವಾಯುಪಡೆಯ ಸಾಮರ್ಥ್ಯ ಹೇಗೆ ಅನಾವರಣಗೊಂಡಿತು ಎನ್ನುವುದಕ್ಕೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಜೀವಂತ ಉದಾಹರಣೆ. ಇದು ನಮಗೆ ವೃತ್ತಿಪರ ಹೆಮ್ಮೆ. ವಾಯುಪಡೆಯು ದಿಟ್ಟವಾದ ಮತ್ತು ನಿಖರವಾದ ದಾಳಿಯು ಶತ್ರು ಪಾಳಯದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತು’ ಎಂದರು.
ಸಿಂಧೂರ ಕಾರ್ಯಾಚರಣೆಯಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ ರಾಫೆಲ್ ಸ್ಕಾಡ್ರನ್ ಸೇರಿದಂತೆ ವಿವಿಧ ಐಎಎಫ್ ಘಟಕಗಳನ್ನು ಅಭಿನಂದಿಸಿದ ಸಿಂಗ್, ಪ್ರಶಂಸನಾ ಪತ್ರಗಳನ್ನು ವಿತರಿಸಿದರು.
’ರಾಷ್ಟ್ರೀಯ ಭದ್ರತೆ ಸೇರಿದಂತೆ ಭವಿಷ್ಯದಲ್ಲಿ ಎದುರಾಗಬಹುದಾದ ಎಲ್ಲ ದಾಳಿಗಳನ್ನು ಎದುರಿಸಲು ವಾಯುಪಡೆ ಸರ್ವ ಸನ್ನದ್ಧವಾಗಿರಬೇಕು ಎಂದು ಸಿಂಗ್ ಪುನರುಚ್ಛರಿಸಿದರು. ‘ನಿಖರವಾದ ಯೋಜನೆ, ಶಿಸ್ತುಬದ್ಧವಾದ ತರಬೇತಿ, ಖಚಿತ ಫಲಿತಾಂಶ’ಕ್ಕೆ ಆಪರೇಷನ್ ಸಿಂಧೂರ ಉತ್ತಮ ಉದಾಹರಣೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.