ಜಮ್ಮು: ‘ಆಪರೇಷನ್ ಸಿಂಧೂರ’ದ ವೇಳೆ ಅಂತರರಾಷ್ಟ್ರೀಯ ಗಡಿಯಲ್ಲಿ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನದ 76 ಗಡಿ ಹೊರಠಾಣೆಗಳು, 42 ಮುಂಚೂಣಿ ನೆಲೆಗಳು ಹಾಗೂ ಭಯೋತ್ಪಾದಕರ ಮೂರು ನೆಲೆಗಳನ್ನು ನಾಶಗೊಳಿಸಲಾಗಿತ್ತು’ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮಂಗಳವಾರ ತಿಳಿಸಿದೆ.
‘40 ರಿಂದ 50 ಮಂದಿ ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭಾರತದ 60 ಹೊರಠಾಣೆಗಳು, 49 ಮುಂಚೂಣಿ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಅತ್ಯಂತ ಬಲವಾಗಿ ಪ್ರತ್ಯುತ್ತರ ನೀಡಿದೆ’ ಎಂದು ಬಿಎಸ್ಎಫ್ ಡಿಐಜಿ ಚಿತಾರ್ಪಾಲ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದರು.
‘ಸುಂದರ್ಬನಿ ವಲಯದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್ಐ)ಯ ಮುಖ್ಯ ನೆಲೆಯನ್ನು ಭಾರತ ಸಂಪೂರ್ಣವಾಗಿ ನಾಶಪಡಿಸಿದ್ದು, ಈಗ ಆ ಸ್ಥಳದಲ್ಲಿ ಯಾವುದೇ ಚಲನವಲನಗಳು ಕಂಡುಬರುತ್ತಿಲ್ಲ’ ಎಂದು ಸಿಂಗ್ ತಿಳಿಸಿದರು.
‘ಪಾಕಿಸ್ತಾನ ಹಲವು ನೆಲೆಗಳಿಗೆ ತೀವ್ರ ಹಾನಿಯಾಗಿದ್ದು, ಪಾಕಿಸ್ತಾನಿ ಸೇನೆಯ ಯೋಧರು ಹಾಗೂ ಭಯೋತ್ಪಾದಕರು ಮೃತಪಟ್ಟಿರುವುದನ್ನು ಗುಪ್ತಚರ ಸಂಸ್ಥೆಗಳು ಖಚಿತಪಡಿಸಿವೆ’ ಎಂದು ಜಮ್ಮು ವಿಭಾಗದ ಬಿಎಸ್ಎಫ್ ಐಜಿ ಶಶಾಂಕ್ ಆನಂದ್ ತಿಳಿಸಿದ್ದಾರೆ.
‘ಮೇ 9 ಹಾಗೂ 10ರಂದು ‘ಚಿಕನ್ ನೆಕ್’ನ ವಿರುದ್ಧ ಜಾಗದಲ್ಲಿದ್ದ ಲಷ್ಕರ್–ಎ–ತಯಬಾದ ಕೇಂದ್ರ, ಲೋನಿ, ಮಸ್ತ್ಪುರ್ ಹಾಗೂ ಛಾಬ್ಬ್ರಾದ ಕೇಂದ್ರವನ್ನು ವಿಶೇಷ ಶಸ್ತ್ರಾಸ್ತ್ರ ವ್ಯವಸ್ಥೆ ಬಳಸಿಕೊಂಡು ನಾಶಪಡಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.