ADVERTISEMENT

ಅದಾನಿ ಪ್ರಕರಣ: ಇ.ಡಿ ಕಚೇರಿಯತ್ತ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2023, 16:21 IST
Last Updated 5 ಏಪ್ರಿಲ್ 2023, 16:21 IST
–
   

ನವದೆಹಲಿ: ಅದಾನಿ ಸಮೂಹದ ವಿರುದ್ಧದ ಆರೋಪಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿವರೆಗೆ ಬುಧವಾರ ಮೆರವಣಿಗೆ ಕೈಗೊಂಡವು. ಆದರೆ, ಪೊಲೀಸರು ಮೆರವಣಿಗೆಯನ್ನು ಸಂಸತ್‌ ಭವನದ ಹೊರಗೆ ತಡೆದರು.

ಹೀಗಾಗಿ, ವಿಪಕ್ಷಗಳ ನಾಯಕರು ತಮ್ಮ ಮನವಿ ಪತ್ರವನ್ನು ಇ–ಮೇಲ್‌ ಮೂಲಕ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದರು.

ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿರುವ ವ್ಯಕ್ತಿಯೇ, ಸಮೂಹದ ಒಡೆತನದಲ್ಲಿರುವ ರಕ್ಷಣಾ ಸಾಧನಗಳ ಉತ್ಪಾದನಾ ಕಂಪನಿಯೊಂದರ ಸಹ ಮಾಲೀಕರಾಗಿರುವುದು ಹೇಗೆ ಎಂದೂ ವಿಪಕ್ಷಗಳು ಈ ಪತ್ರದಲ್ಲಿ ಪ್ರಶ್ನಿಸಿವೆ.

ADVERTISEMENT

ಕನಿಷ್ಠ 18 ವಿರೋಧ ಪಕ್ಷಗಳ ಸಂಸದರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಎನ್‌ಸಿಪಿ, ಟಿಎಂಸಿ ಸಂಸದರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿರಲಿಲ್ಲ. ಇ.ಡಿ ನಿರ್ದೇಶಕರಿಗೆ ಬರೆದ ಪತ್ರಕ್ಕೂ ಸಹಿ ಹಾಕಿಲ್ಲ.

ಪ್ರಸ್ತಾಪ: ಅದಾನಿ ಸಮೂಹದ ವಿರುದ್ಧದ ಆರೋಪಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದವು. ಬೆಳಿಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷಗಳು ಅದಾನಿ ಸಮೂಹ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದವು.

‘ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂಬುದಾಗಿ ಲಂಡನ್‌ನಲ್ಲಿ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿಯುವ ಮೂಲಕ ಬಿಜೆಪಿ ಸದಸ್ಯರು ಕಾಂಗ್ರೆಸ್‌ಅನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದರು. ನಂತರ, ಗದ್ದಲ ಹೆಚ್ಚಾಗುತ್ತಿದ್ದಂತೆಯೇ, ಉಭಯ ಸದನಗಳನ್ನು ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.