ನವದೆಹಲಿ:ಬುಧವಾರ ಬೆಳಗ್ಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ 9 ವಿಮಾನ ನಿಲ್ದಾಣಗಳು ಮಧ್ಯಾಹ್ನದ ಬಳಿಕ ಕಾರ್ಯಾರಂಭ ಮಾಡಿವೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಶ್ರೀನಗರ, ಜಮ್ಮು, ಲೇಹ್, ಪಠಾಣ್ಕೋಟ್, ಅಮೃತಸರ, ಶಿಮ್ಲಾ, ಕಾಂಗ್ರಾ, ಕುಲುಮನಾಲಿ ಮತ್ತು ಪಿತ್ತೋರ್ಗಡ ವಿಮಾನ ನಿಲ್ದಾಣಗಳನ್ನು ಸ್ಥಗಿತಗೊಳಿಸುವಂತೆ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (ಎಎಐ) ಬುಧವಾರ ಸೂಚಿಸಿತ್ತು.
ಬುಧವಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ವಿಮಾನ ನಿಲ್ದಾಣಗಳೂ ಸೇರಿದಂತೆ 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರನಿರ್ವಹಣೆ ಮಾಡುತ್ತದೆ.ಕಾಶ್ಮೀರ ಮಾರ್ಗವಾಗಿ ಏಷ್ಯಾ ಮತ್ತು ಯುರೋಪ್ ನಡುವೆ ಸಂಚರಿಸುತ್ತಿದ್ದ ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಪಾಕಿಸ್ತಾನ ಅಥವಾ ಗಡಿಯಲ್ಲಿ ಭಾರತದ ಯಾವುದೇ ನಾಗರಿಕ ವಿಮಾನಗಳು ಹಾರಾಟ ನಡೆಸುತ್ತಿಲ್ಲ.
ಪಾಕಿಸ್ತಾನದ ವಾಯುಪ್ರದೇಶ ಬಳಸಿಕೊಂಡು ಆಗ್ನೇಯ ಏಷ್ಯಾ ಮತ್ತು ಯೂರೋಪ್ ನಡುವೆ ನಿತ್ಯ 220 ವಿಮಾನಗಳು ಹಾರಾಟ ನಡೆಸುತ್ತವೆ.
ಜಮ್ಮು, ಲೇಹ ಮತ್ತು ಶ್ರೀನಗರಕ್ಕೆ ಹೋಗುತ್ತಿದ್ದ ವಿಮಾನಗಳನ್ನು ವಾಪಸ್ ಕಳುಹಿಸಲಾಗಿದೆ. ಚಂಡೀಗಢ, ಪಠಾನ್ಕೋಟ್, ಹಲ್ವಾರಾ ಮತ್ತು ಬಟಿಂಡಾ ವಿಮಾನ ನಿಲ್ದಾಣಗಳಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಚಂಡೀಗಢದಲ್ಲಿ ಕೆಲ ಕಾಲ ಸ್ಥಗಿತಗೊಂಡಿದ್ದ ವಾಣಿಜ್ಯ ವಿಮಾನಗಳ ಕಾರ್ಯಾಚರಣೆ ಪುನರ್ ಆರಂಭಗೊಂಡಿದೆ.
ವಿಸ್ತಾರ ವಿಮಾನಯಾನ ಸಂಸ್ಥೆ, ‘ಅಮೃತಸರ, ಶ್ರೀನಗರ ಮತ್ತು ಜಮ್ಮುವಿನಿಂದ ಹೊರಡುವ ಮತ್ತು ಬರುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಟ್ವೀಟ್ನಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.