ADVERTISEMENT

ಬಯಲು ಶೌಚ ಮುಕ್ತ ಗ್ರಾಮ: ವರ್ಷದೊಳಗೆ ದುಪ್ಪಟ್ಟುಗೊಳಿಸಲು ಯತ್ನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 11:03 IST
Last Updated 12 ಫೆಬ್ರುವರಿ 2023, 11:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದೇಶದಲ್ಲಿ ಈವರೆಗೆ 1.8 ಲಕ್ಷಕ್ಕೂ ಹೆಚ್ಚು ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಈ ವರ್ಷ ಈ ಸಂಖ್ಯೆಯನ್ನು ದ್ವಿಗುಣಗೊಳಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೌಚಾಲಯ ಸೌಲಭ್ಯಗಳ ಸರಿಯಾದ ನಿರ್ವಹಣೆ ಖಚಿತಪಡಿಸಿಕೊಳ್ಳಲು ಬಯಲು ಶೌಚಮುಕ್ತ (ಒಡಿಎಫ್‌+) ಸ್ಥಿತಿಯ ಸುಸ್ಥಿರತೆ ಕಡೆಗೆ ಕೆಲಸ ಮಾಡುವ ಪ್ರದೇಶಗಳನ್ನು ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ) ಎಂದು ವರ್ಗೀಕರಿಸಲಾಗಿದೆ. 2024 ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಗ್ರಾಮಗಳು ಒಡಿಎಫ್ ಪ್ಲಸ್ ಎಂದು ಘೋಷಿಸಿಕೊಳ್ಳುವ ಉದ್ದೇಶದಿಂದ ಎಸ್‌ಬಿಎಂ ಗ್ರಾಮೀಣ ಹಂತ -2 ಅನ್ನು 2020ರಲ್ಲಿ ಪ್ರಾರಂಭಿಸಲಾಯಿತು.

‘ಎಸ್‌ಬಿಎಂ ಗ್ರಾಮೀಣ ಹಂತ -2 ರಲ್ಲಿ ಪರಿಣಾಮಕಾರಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಮೂಲಕ ಹಳ್ಳಿಗಳಲ್ಲಿ ಸಮಗ್ರ ನೈರ್ಮಲ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಇದು ಗ್ರಾಮಗಳು ಬಯಲು ಶೌಚ ಮುಕ್ತವಾಗಲು ಕಾರಣವಾಗುತ್ತದೆ. ಗೋಬರ್ಧನ್ ಯೋಜನೆಯಡಿ ಜೈವಿಕ ಅನಿಲ ಮತ್ತು ಸಾವಯವ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸಲು ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ಬ್ಲಾಕ್‌ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಬೇಕು’ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ವಿನಿ ಮಹಾಜನ್ ತಿಳಿಸಿದ್ದಾರೆ.

ADVERTISEMENT

ದೇಶದ 6 ಲಕ್ಷ ಹಳ್ಳಿಗಳ ಪೈಕಿ 1.8 ಲಕ್ಷಕ್ಕೂ ಹೆಚ್ಚು ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ ಎಂದರು.

ಗೋಬರ್ಧನ್ ಯೋಜನೆಯು ಹಳ್ಳಿಗಳು ತಮ್ಮ ಜಾನುವಾರು, ಕೃಷಿ ಮತ್ತು ಸಾವಯವ ತ್ಯಾಜ್ಯವನ್ನು ಸುರಕ್ಷಿತವಾಗಿ ನಿರ್ವಹಿಸಲು ಬೆಂಬಲಿಸುವ ಗುರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.