ಶ್ರೀನಗರ: ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯ ಹಿಂದೆ, ಇಬ್ಬರು ಸ್ಥಳೀಯರು ಸೇರಿದಂತೆ 5–6 ಮಂದಿ ಉಗ್ರರ ಕೈವಾಡ ಇದೆ. ಇವರು ಅಪಾರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ.
ಉಗ್ರರು ಹತ್ಯೆ ಮಾಡುವುದಕ್ಕೆ ಅನುಸರಿಸಿದ ವಿಧಾನಗಳು ಭೀಕರವಾಗಿದ್ದವು ಎಂಬ ಮಾತನ್ನು ಈ ದಾಳಿಯನ್ನು ಪ್ರತ್ಯಕ್ಷ ಕಂಡ ಕೆಲವರು ಹೇಳುತ್ತಾರೆ.
‘ಉಗ್ರರು ಸೇನೆಯ ಯೋಧರಂತೆ ಸಮವಸ್ತ್ರಗಳನ್ನು ಧರಿಸಿದ್ದರು. ಪ್ರವಾಸಿಗರ ಬಳಿ ತೆರಳಿ, ಅವರ ಗುರುತಿನ ಚೀಟಿ ಕೇಳಿದ್ದಾರೆ. ನಂತರ ಎಕೆ–47 ರೈಫಲ್ಗಳಿಂದ ಗುಂಡು ಹಾರಿಸಿದ್ದಾರೆ’ ಎಂದು ಅವರು ವಿವರಿಸುತ್ತಾರೆ.
‘ಯಾವುದೇ ವಿವೇಚನೆಯಿಲ್ಲದೆಯೇ, ನಾಗರಿಕರನ್ನು ಗುರಿಯಾಗಿಸಿ ಉಗ್ರರು ಗುಂಡು ಹಾರಿಸಿದರು. ಕೆಲವೇ ಕ್ಷಣಗಳಲ್ಲಿ ಘಟನಾ ಸ್ಥಳದಲ್ಲಿ ಆತಂಕ, ಗೊಂದಲ ಮನೆ ಮಾಡಿತ್ತು’ ಎಂದೂ ಕೆಲವರು ಭೀಕರ ಕ್ಷಣಗಳನ್ನು ವಿವರಿಸುತ್ತಾರೆ.
‘ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ಮಾಡುವುದಕ್ಕೂ ಮುನ್ನ ಒಂದು ಗಂಟೆಗೂ ಹೆಚ್ಚು ಸಮಯದಿಂದ ಉಗ್ರರು ಸ್ಥಳದಲ್ಲಿ ಇದ್ದರು. ತಾವು ರೂಪಿಸಿದ್ದ ಯೋಜನೆಯಂತೆಯೇ ದಾಳಿ ಮಾಡಿದರು ಹಾಗೂ ಇದು ಅಧಿಕ ಸಾವು–ನೋವಿಗೆ ಕಾರಣವಾಯಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
‘ಇದು ಪೂರ್ವ ಯೋಜಿತ ಕೃತ್ಯ. ಗುಂಪೊಂದರಿಂದ ಒಬ್ಬೊಬ್ಬರಂತೆ ಪ್ರವಾಸಿಗನನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿದ್ದಾರೆ. ಅವರ ಗುರುತು ಕೇಳಿದ ನಂತರ, ಗುಂಡಿಕ್ಕಿದ್ದಾರೆ. ಹೆಚ್ಚು ಜನರನ್ನು ಹತ್ಯೆ ಮಾಡಬೇಕು ಎಂಬ ಉದ್ದೇಶದಿಂದಲೇ ಉಗ್ರರು ಬಹಳ ಸೂಕ್ಷ್ಮವಾಗಿ ದಾಳಿ ನಡೆಸಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.