ಎಚ್.ಡಿ. ದೇವೇಗೌಡ
(ಪಿಟಿಐ ಚಿತ್ರ)
ನವದೆಹಲಿ: 'ಭಯೋತ್ಪಾದನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿಲುವು ತಳೆದಿದ್ದಾರೆ' ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಇಂದು (ಮಂಗಳವಾರ) ಹೇಳಿದ್ದಾರೆ.
'ಭಯೋತ್ಪಾದಕರಿಗೆ ನಾವು ತಕ್ಕ ಪಾಠ ಕಲಿಸಬೇಕಿದೆ. ಭಯೋತ್ಪಾದನೆ ವಿರುದ್ಧ ಪ್ರಧಾನಿಯೊಬ್ಬರು ಇಷ್ಟೊಂದು ದಿಟ್ಟ ನಿಲುವು ತಳೆದಿರುವುದು ಇದೇ ಮೊದಲು. ಯಾವುದೇ ಪ್ರಧಾನಿ ಸೇನೆಗೆ ಸರ್ವೋಚ್ಚ ಅಧಿಕಾರವನ್ನು ನೀಡಿರಲಿಲ್ಲ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪಹಲ್ಗಾಮ್ ದಾಳಿ ಬೆನ್ನಲ್ಲೇ ಉಗ್ರರ ದಮನಕ್ಕೆ ದಾಳಿಯ ಮಾದರಿ, ಗುರಿ ಹಾಗೂ ಸಮಯ ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೂ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದ್ದಾರೆ.
'ಈಗಿನ ಪರಿಸ್ಥಿತಿಯನ್ನು 1971ರ ಭಾರತ-ಪಾಕ್ ಯುದ್ಧದೊಂದಿಗೆ ಹೋಲಿಕೆ ಮಾಡುವಂತಿಲ್ಲ. ಎರಡೂ ವಿಭಿನ್ನ ಸನ್ನಿವೇಶಗಳನ್ನು ಹೊಂದಿತ್ತು' ಎಂದು ದೇವೇಗೌಡ ಹೇಳಿದ್ದಾರೆ.
ಮುಂಬರುವ ಜನಗಣತಿಯಲ್ಲಿ ಜಾತಿಗಣತಿ ಮಾಡುವ ನಿರ್ಧಾರವನ್ನು ದೇವೇಗೌಡ ಸ್ವಾಗತಿಸಿದ್ದಾರೆ. ಆದರೆ ಜಾತಿಗಣತಿ ಹೆಸರಿನಲ್ಲಿ ಕರ್ನಾಟಕ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.