ಜಮ್ಮು: ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಶನಿವಾರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ರಕ್ಷಣಾ ಪಡೆ ವಕ್ತಾರರು ತಿಳಿಸಿದ್ದಾರೆ.
ಮನ್ಕೋಟೆ ಸೆಕ್ಟರ್ನಲ್ಲಿ ರಾತ್ರಿ 1.30ರ ಸುಮಾರಿಗೆ ಗಡಿಯುದ್ದಕ್ಕೂ ಪಾಕ್ ಸೇನೆ ಮಾರ್ಟರ್ ಶೆಲ್ ಮತ್ತು ಗುಂಡಿನ ದಾಳಿ ಆರಂಭಿಸಿದ್ದು, ಇನ್ನೂ ಮುಂದುವರಿದಿದೆ. ಗಡಿಯಲ್ಲಿ ಯಾವುದೇ ಭಾರತೀಯ ನಾಗರಿಕ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ಪಾಕ್ ಸೇನೆಯ ಪುಂಡಾಟಕ್ಕೆ ಭಾರತೀಯ ಸೇನೆಯು ತಕ್ಕ ಉತ್ತರ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಬಲಿಯಾಗಿದ್ದರಿಂದ ಭಾರತ ಉಗ್ರರನ್ನು ಹತ್ತಿಕ್ಕಲು ಬಾಲಾಕೋಟ್ ಉಗ್ರರ ಶಿಬಿಗಳ ಮೇಲೆ ವಾಯು ದಾಳಿ ನಡೆಸಿತ್ತು. ಈ ಬೆಳವಣಿಗೆಯ ನಂತರ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಕದನ ವಿರಾಮ ಪ್ರಕರಣ ಹೆಚ್ಚಾಗಿವೆ.
ನಾಲ್ವರು ನಾಗರಿಕರು ಸಾವು: ಬಾಲಾಕೋಟ್ ಉಗ್ರ ಶಿಬಿರಗಳ ಮೇಲಿ ವಾಯು ದಾಳಿ ನಂತರ, ರಾಜ್ಯದ ಎಲ್ಒಸಿಯಲ್ಲಿ ಅದರಲ್ಲೂ ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಈವರೆಗೆ ಪಾಕಿಸ್ತಾನ ಸೇನೆ 100ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಪಾಕ್ ಸೈನಿಕರು ಗಡಿಯ 12 ಗ್ರಾಮಗಳನ್ನು ಗುರಿಯಾಗಿಸಿ ನಡೆಸಿರುವ ದಾಳಿಯಿಂದ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.