ಭೋಪಾಲ್: ಪಶ್ಚಿಮ ಬಂಗಾಳದ ಪಂಚಾಯಿತಿ ಚುನಾವಣೆಯಲ್ಲಿ ನಡೆದ ಹಿಂಸಾಚಾರವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಚಲ ಧೈರ್ಯ ಮತ್ತು ದೃಢ ನಿರ್ಧಾರದ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ, ಅವರ ಕಣ್ಗಾವಲಿನಲ್ಲಿಯೇ ನಡೆದ ಹಿಂಸಾಚಾರ ಭಯಾನಕವಾದುದು. ಇದು ಅಕ್ಷಮ್ಯ ಅಪರಾಧವೂ ಆಗಿದೆ’ ಎಂದು ಸೋಮವಾರ ಟ್ವೀಟ್ ಮಾಡಿದ್ದಾರೆ.
ಸಿಪಿಎಂ ಅಧಿಕಾರಾವಧಿಯಲ್ಲಿಯೂ ಇದೇ ರೀತಿಯ ಹಿಂಸಾಚಾರ ನಡೆದಿತ್ತು. ಅದನ್ನು ಮಮತಾ ಧೈರ್ಯವಾಗಿ ಎದುರಿಸಿದ್ದರು. ಆದರೆ, ಈಗಿನ ಸಂಘರ್ಷವು ಜನತಂತ್ರ ವ್ಯವಸ್ಥೆಗೆ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ 61 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಹಲವೆಡೆ ಮತ ಪೆಟ್ಟಿಗೆಗಳನ್ನೇ ದುಷ್ಕರ್ಮಿಗಳು ಹೊತ್ತೊಯ್ದಿದ್ದರು. ಕೆಲವೆಡೆ ಬೆಂಕಿ ಹಚ್ಚಿದ್ದರೆ, ಕೆರೆಗಳಿಗೆ ಎಸೆದ ನಿದರ್ಶನವೂ ಇದೆ. ಮತ ಪತ್ರಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.