ನವದೆಹಲಿ: ನಾಗರಿಕ ಸೇವಾ ಅಧಿಕಾರಿಗಳ ಜಮ್ಮು ಮತ್ತು ಕಾಶ್ಮೀರ ಕೇಡರ್ ಅನ್ನು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಕೇಡರ್ನೊಂದಿಗೆ ವಿಲೀನಗೊಳಿಸುವ‘ಜಮ್ಮು ಮತ್ತು ಕಾಶ್ಮೀರ ಪುನರ್ರಚನೆ (ತಿದ್ದುಪಡಿ) ಮಸೂದೆ 2021' ಅನ್ನು ಲೋಕಸಭೆ ಶನಿವಾರ ಧ್ವನಿಮತದಿಂದ ಅಂಗೀಕರಿಸಿತು.
‘ಕೇಂದ್ರವು ಸೂಕ್ತ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲಿದೆ. 2019ರಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕ ರಾಜ್ಯದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ’ ಎಂದು ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
‘ಈ ಪ್ರದೇಶದಲ್ಲಿ ಎರಡು ಎಐಐಎಂಎಸ್ ಸ್ಥಾಪನೆ ಕೆಲಸ ಆರಂಭವಾಗಿದೆ. 2022ರ ವೇಳೆಗೆ ಕಣಿವೆಗೆ ರೈಲು ಸಂಪರ್ಕ ಕಲ್ಪಿಸಲಾಗುವುದು. ಇದೀಗ ಜನರಿಂದಲೇ ಆಯ್ಕೆಯಾದವರು ಕಾಶ್ಮೀರದಲ್ಲಿ ಆಡಳಿತ ಮಾಡುವಂತಾಗಿದೆ ಹೊರತು ರಾಜರಿಗೆ ಅಥವಾ ರಾಣಿಯರಿಗೆ ಜನಿಸಿದವರಲ್ಲ’ ಎಂದು ಹೇಳಿದ ಗೃಹ ಸಚಿವ ಅಮಿತ್ ಶಾ, ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಸಾಕಷ್ಟು ಜಮೀನು ಇದೆ, ಹೀಗಾಗಿ ಜನರ ಜಮೀನನ್ನು ಕಬಳಿಸುವುದಿಲ್ಲ’ ಎಂದರು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಸೂದೆಯನ್ನು ವಿರೋಧಿಸಿದರು. ಜಮ್ಮು ಮತ್ತು ಕಾಶ್ಮೀರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಸ್ಥಳೀಯರಾಗಿರಬೇಕು ಮತ್ತು ಅಧಿಕಾರಿಗಳಿಗೆ ನೆಲೆದ ವಾಸ್ತವತೆಗಳ ಅರಿವಿರಬೇಕು ಎಂದು ಅವರು ಪ್ರತಿಪಾದಿಸಿದರು.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಂಸದ ಹಸ್ನೈನ್ ಮಸೂದಿ ಅವರು, ‘ಈ ಮಸೂದೆ ಜಮ್ಮು ಮತ್ತು ಕಾಶ್ಮೀರದ ಜನರ ಮೇಲಿನ ಹಲ್ಲೆಯಾಗಿದೆ’ ಎಂದು ದೂರಿದರು. ಅಲ್ಲದೆ 2019ರ ಆಗಸ್ಟ್ 5ರ ಮೊದಲು ಇದ್ದ ಜಮ್ಮು ಮತ್ತು ಕಾಶ್ಮೀರದ ಸ್ಥಾನವನ್ನು ಸರ್ಕಾರ ಮತ್ತೆ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಬಿಎಸ್ಪಿ ಬೆಂಬಲ
ಮಸೂದೆಗೆ ಬಿಎಸ್ಪಿ ಸಂಸದ ಮಾಲೂಕ್ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಡ, ದಲಿತ ಮತ್ತು ಅವಕಾಶ ವಂಚಿತ ಸಮುದಾಯಗಳ ಸೌಲಭ್ಯ ಕಲ್ಪಿಸುವ ಕೇಂದ್ರದ ಕ್ರಮಗಳನ್ನು ವಿರೋಧಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ವೈಎಸ್ಆರ್, ಜೆಡಿಯು ಪಕ್ಷಗಳ ಸಂಸದರು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರೆ, ಡಿಎಂಕೆ, ಟಿಎಂಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.