ADVERTISEMENT

ಭದ್ರತಾ ವೈಫಲ್ಯ | ಸಂಚಿನ ಹಿಂದಿರುವ ಮಾಸ್ಟರ್‌ಮೈಂಡ್‌ ಲಲಿತ್‌ ಅಲ್ಲ ಮನೋರಂಜನ್‌

ಪಿಟಿಐ
Published 14 ಜನವರಿ 2024, 2:54 IST
Last Updated 14 ಜನವರಿ 2024, 2:54 IST
   

ನವದೆಹಲಿ: ಸಂಸತ್ ಭದ್ರತಾ ವೈಫಲ್ಯದ ಆರೋಪಿಗಳನ್ನು ಮಂಪರು ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದ್ದು, ಮೈಸೂರು ಮೂಲದ ಮನೋರಂಜನ್‌ ಸಂಚಿನ ಹಿಂದಿರುವ ಮಾಸ್ಟರ್ ಮೈಂಡ್‌ ಎಂದು ತಿಳಿದುಬಂದಿದೆ.

‘ನೀಲಂ ಹೊರತುಪಡಿಸಿ ಇತರ ಐವರು ಆರೋಪಿಗಳನ್ನು(ಸಾಗರ್ ಶರ್ಮಾ, ಮನೋರಂಜನ್ ಡಿ, ಅಮೋಲ್ ಶಿಂದೆ, ಮಹೇಶ್‌ ಕುಮಾವತ್, ಲಲಿತ್ ಝಾ) ಡಿ. 8 ರಂದು ಸುಳ್ಳು ಪತ್ತೆ ಪರೀಕ್ಷೆಗೆ(ಪಾಲಿಗ್ರಾಫಿ) ಒಳಪಡಿಸಲು ಗುಜರಾತ್‌ಗೆ ಕರೆದೊಯ್ಯಲಾಗಿತ್ತು. ಮನೋರಂಜನ್ ಮತ್ತು ಸಾಗರ್‌ನನ್ನು ಹೆಚ್ಚುವರಿ ಬ್ರೈನ್‌ ಮ್ಯಾಪಿಂಗ್ ಮತ್ತು ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು’ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದರು.

‘ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಂದ ಈ ಸಂಚಿನ ಹಿಂದಿರುವ ಮಾಸ್ಟರ್ ಮೈಂಡ್ ಮನೋರಂಜನ್‌ ಎಂಬುದು ಖಚಿತವಾಗಿದೆ’ ಎಂದರು.

ADVERTISEMENT

‘ನಿರುದ್ಯೋಗ, ಮಣಿಪುರ ಬಿಕ್ಕಟ್ಟು ಮತ್ತು ರೈತರ ಸಮಸ್ಯೆಗಳ ಬಗ್ಗೆ ಆರೋಪಿಗಳು ಅಸಮಾಧಾನ ಹೊಂದಿದ್ದು, ಸರ್ಕಾರಕ್ಕೆ ಈ ಕುರಿತಂತೆ ಬಲವಾದ ಸಂದೇಶ ನೀಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ’ ಎಂದು ಈವರೆಗಿನ ತನಿಖೆಗಳು ಹೇಳುತ್ತಿವೆ ಎಂದರು.

‘ಶನಿವಾರ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಆರೋ‍ಪಿ ಲಲಿತ್ ಝಾನನ್ನು ಕೃತ್ಯದ ಮಾಸ್ಟರ್ ಮೈಂಡ್ ಎಂದು ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.