ನವದೆಹಲಿ (ಪಿಟಿಐ): ಸಂಸತ್ತಿನ ಉಭಯ ಸದನಗಳ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಸೋಮವಾರ ಯಾವುದೇ ಚರ್ಚೆ ಇಲ್ಲದೆಯೇ ಹಣಕಾಸು ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದ ಬಳಿಕ ಅಧಿವೇಶನವನ್ನು ಮುಂದೂಡಲಾಯಿತು.
ಈ ಮೊದಲು ಏಪ್ರಿಲ್ 3ರವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್–19ರಿಂದಾಗಿ ಅಧಿವೇಶನಮುಂದೂಡುವ ನಿರ್ಧಾರ ಕೈಗೊಳ್ಳಲಾಯಿತು. ಕೊರೊನಾ ವೈರಸ್ ಭೀತಿಯಿಂದಾಗಿ ಟಿಎಂಸಿ, ಶಿವಸೇನಾ, ತೃಣಮೂಲ ಕಾಂಗ್ರೆಸ್ ಹಾಗೂ ಎನ್ಸಿಪಿ ಸೇರಿದಂತೆ ಹಲವು ಪಕ್ಷಗಳು ಅಧಿವೇಶನಕ್ಕೆ ಹಾಜರಾಗದಿರಲು ನಿರ್ಧರಿಸಿದ್ದವು.
ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಹಾಗೂ ಇದರಿಂದ ಸೃಷ್ಟಿಯಾಗಿರುವ ಸವಾಲುಗಳನ್ನು ಎದುರಿಸಲು ವಿಶೇಷ ಪ್ಯಾಕೆಜ್ ಘೋಷಿಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಒತ್ತಾಯಿಸಿದರು.
ರಾಜ್ಯಸಭೆಯಲ್ಲೂ ಸೋಮವಾರದ ಕಲಾಪಗಳು ಮುಕ್ತಾಯಗೊಂಡ ಬಳಿಕ ಅಧಿವೇಶನವನ್ನು ಮುಂದೂಡಲಾಯಿತು.
ರಜೆ ಕೋರಿದ ಮನಮೋಹನ್ ಸಿಂಗ್: ಇದಕ್ಕೂ ಮುನ್ನ, ಅನಾರೋಗ್ಯದ ಕಾರಣ ಮಾರ್ಚ್ 19ರಿಂದ ಪ್ರಸ್ತುತ ಅಧಿವೇಶನದ ಉಳಿದ ಅವಧಿಯವರೆಗೆ ರಜೆ ನೀಡುವಂತೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಮನಮೋಹನ್ ಸಿಂಗ್ ಕೋರಿಕೆಗೆ ಸದನ ಅನುಮೋದನೆ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.