ಕೋಲ್ಕತ್ತ: ಪಶ್ಚಿಮ ಬಂಗಾಳ ಸ್ಕೂಲ್ ಸರ್ವೀಸ್ ಕಮಿಷನ್ (ಡಬ್ಲ್ಯುಎಸ್ಎಸ್ಸಿ)ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿ ನಡೆಸಿದ ಆರೋಪದ ತನಿಖೆಯ ಸಂಬಂಧ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಅವರು ಬುಧವಾರ 2ನೇ ಬಾರಿಗೆ ಸಿಬಿಐ ವಿಚಾರಣೆ ಎದುರಿಸಿದರು.
ಅಕ್ರಮ ನೇಮಕಾತಿ ನಡೆದ ಸಂದರ್ಭದಲ್ಲಿ ಚಟರ್ಜಿ ಅವರು ಶಿಕ್ಷಣ ಸಚಿವರಾಗಿದ್ದರು. ಅಕ್ರಮಕ್ಕೆ ನಂಟಿರುವ ಸಲಹಾ ಸಮಿತಿ ಸದಸ್ಯರು ಮತ್ತು ಚಟರ್ಜಿ ಅವರ ಉತ್ತರ ತಾಳೆಯಾಗದ ಹಿನ್ನೆಲೆಯಲ್ಲಿ ಚಟರ್ಜಿ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಿ ಮತ್ತೆ ಅದೇ ಪ್ರಶ್ನೆಗಳನ್ನು ಕೇಳಲಾಯಿತು. ಶಿಕ್ಷಣ ಸಚಿವ ಪರೇಶ್ ಅಧಿಕಾರಿ ಪುತ್ರಿಯನ್ನು ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ನೇಮಿಸಿದ ಬಗ್ಗೆಯೂ ಪ್ರಶ್ನಿಸಲಾಯಿತು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದರು.
ಈ ಪ್ರಕರಣಕ್ಕೂ ಚಟರ್ಜಿ ಅವರಿಗೂ ಸಂಬಂಧ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದೂ ತಿಳಿಸಿದರು.
ರಾಜ್ಯದ ಅನುದಾನಿತ ಶಾಲೆಗಳಲ್ಲಿ ಬಾಕಿ ಉಳಿದ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ನಡೆಸಲು ಶಾಲಾ ಶಿಕ್ಷಣ ಇಲಾಖೆಯು 2019ರಲ್ಲಿ ಸಲಹಾ ಸಮಿತಿ ರಚಿಸಿ ಸದಸ್ಯರನ್ನು ನೇಮಿಸಿತ್ತು.
ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಕೋಲ್ಕತ್ತ ಹೈಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಮೇ 18 ರಂದು ಪಾರ್ಥ ಚಟರ್ಜಿ ಅವರು ಮೇ 18 ರಂದು ಸಿಬಿಐ ವಿಚಾರಣೆ ಎದುರಿಸಿದ್ದರು. ಚಟರ್ಜಿ ಸೇರಿದಂತೆ ಸಲಹಾ ಸಮಿತಿಯ ಐವರು ಸದಸ್ಯರನ್ನು ಸಿಬಿಐ ವಿಚಾರಣೆಗೆ ಹಾಜರಾಗಲು ಕೋರ್ಟ್ ಸೂಚಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.