ನವದೆಹಲಿ: ರಾಜಕೀಯ ಪಕ್ಷಗಳು ತಾವು ಕಣಕ್ಕಿಳಿಸುವ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಕುರಿತ ಮಾಹಿತಿಯನ್ನು ಪಕ್ಷದ ವೆಬ್ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗ ಶುಕ್ರವಾರ ಸೂಚಿಸಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ದಿಷ್ಟ ವ್ಯಕ್ತಿಯನ್ನು ಆಯ್ಕೆ ಮಾಡಿರುವುದಕ್ಕೆ ಕಾರಣಗಳನ್ನು ಸಹ ಪ್ರಕಟಿಸಬೇಕು. ಇದರಿಂದ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ಮತದಾರರಿಗೆ ಮಾಹಿತಿ ನೀಡಿದಂತಾಗುತ್ತದೆ ಎಂದೂ ಆಯೋಗ ಹೇಳಿದೆ.
ಬಿಹಾರ ವಿಧಾನಸಭೆಗೆ ಅಕ್ಟೋಬರ್ 28ರಿಂದ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ.ಆಯೋಗ ಇಂಥ ಸೂಚನೆ ನೀಡಿದ ನಂತರ ನಡೆಯುವ ಮೊದಲ ಚುನಾವಣೆಯೂ ಇದಾಗಲಿದೆ.
ಅಷ್ಟೇ ಅಲ್ಲ, ಕ್ರಿಮಿನಲ್ ಹಿನ್ನೆಲೆ ಹೊಂದಿರದ ವ್ಯಕ್ತಿಗಳನ್ನು ಏಕೆ ಸ್ಪರ್ಧಾಕಣಕ್ಕೆ ಇಳಿಸಲಿಲ್ಲ ಎಂಬ ಬಗ್ಗೆಯೂ ಎಲ್ಲ ರಾಜಕೀಯ ಪಕ್ಷಗಳು ವಿವರಣೆ ನೀಡಬೇಕು.
‘ಗೆಲ್ಲುವ ಸಾಮರ್ಥ್ಯವೊಂದೇಅಭ್ಯರ್ಥಿಯ ಆಯ್ಕೆಗೆ ಮಾನದಂಡವಾಗಬಾರದು. ಅಭ್ಯರ್ಥಿಯ ಶಿಕ್ಷಣ, ಸಾಧನೆ ಹಾಗೂ ಪ್ರತಿಭೆಯೇ ಮುಖ್ಯವಾಗಬೇಕು ಎಂಬುದೇ ಇಂತಹ ನಿರ್ದೇಶನಕ್ಕೆ ಕಾರಣ’ ಎಂದು ಆಯೋಗ ಸ್ಪಷ್ಟಪಡಿಸಿದೆ.
‘ತನ್ನ ಅಭ್ಯರ್ಥಿಗಳ ಕುರಿತ ವಿವರಗಳನ್ನು ರಾಷ್ಟ್ರೀಯ ಹಾಗೂ ಸ್ಥಳೀಯ ಭಾಷೆಯ ಪತ್ರಿಕೆಯಲ್ಲಿಯೂ ಪ್ರಕಟಿಸಬೇಕು. ಪಕ್ಷವು ಖಾತೆ ಹೊಂದಿರುವ ಫೇಸ್ಬುಕ್, ಟ್ವಿಟರ್ನಂತಹ ಸಾಮಾಜಿಕ ಮಾಧ್ಯಮದ ವೇದಿಕೆಗಳ ಮೂಲಕವೂ ಪ್ರಚುರಪಡಿಸಬೇಕು‘ ಎಂದು ಆಯೋಗ ಹೇಳಿದೆ.
ಅಭ್ಯರ್ಥಿಗಳ ವಿರುದ್ಧ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಕಳೆದ ಫೆಬ್ರುವರಿಯಲ್ಲಿ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ದೇಶನದಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದ್ದ ಆಯೋಗ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಕಣಕ್ಕಿಳಿಸಲು ಆಯ್ಕೆ ಮಾಡಿರುವುದಕ್ಕೆ ಕಾರಣ ನೀಡುವಂತೆ ತಿಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.