ADVERTISEMENT

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ಗೆ ಜೀವಬೆದರಿಕೆ ಪತ್ರ

ಪಿಟಿಐ
Published 8 ಜನವರಿ 2021, 6:19 IST
Last Updated 8 ಜನವರಿ 2021, 6:19 IST
ನವೀನ್ ಪಟ್ನಾಯಕ್
ನವೀನ್ ಪಟ್ನಾಯಕ್   

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಅವರಿಗೆ ಜೀವಬೆದರಿಕೆ ಇರುವ ಕುರಿತು ಅನಾಮಧೇಯ ವ್ಯಕ್ತಿಯೊಬ್ಬರು ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಅವರಿಗೆ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

ಮುಖ್ಯಮಂತ್ರಿ ಅವರ ಹತ್ಯೆಗೆ ಸಂಚು ನಡೆದಿದೆ ಎಂದು ಶಂಕಿಸಿರುವ ಸರ್ಕಾರ, ಅನಾಮಧೇಯ ಪತ್ರ ಕುರಿತಂತೆ ತನಿಖೆಗೆ ಆದೇಶಿಸಿದೆ.

ಅನಾಮಧೇಯ ಪತ್ರ ಇಂಗ್ಲಿಷ್‌ನಲ್ಲಿದ್ದು, ‘ಆತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಗುತ್ತಿಗೆ ಹತ್ಯೆಗಾರರು ದಾಳಿ ನಡೆಸುವರು’ ಎಂದು ತಿಳಿಸಲಾಗಿದೆ.

ADVERTISEMENT

‘ಗುತ್ತಿಗೆ ಕೊಲೆಗಾರರು ನಿಮ್ಮ ಮೇಲೆ ದಾಳಿ ನಡೆಸಲಿದ್ದಾರೆ ಎಂದು ತಿಳಿಸಲು ಬಯಸುತ್ತೇನೆ. ಇವರು ವೃತ್ತಿಪರ ಹತ್ಯೆಗಾರರು. ಅವರ ಬಳಿಕ ಎಕೆ–47, ಸೆಮಿ ಆಟೊಮ್ಯಾಟಿಕ್ ಪಿಸ್ತೂಲು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಅವರು ಯಾವುದೇ ಸಂದರ್ಭದಲ್ಲಿ ದಾಳಿ ನಡೆಸಬಹುದು, ಜಾಗೃತರಾಗಿರಿ’ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

‘ಪಿತೂರಿಯ ಮಾಸ್ಟರ್ ಮೈಂಡ್ ನಾಗಪುರದಲ್ಲಿ ವಾಸಿಸುತ್ತಿದ್ದಾರೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.