ಮುಂಬೈ: ಪೆಗಾಸಸ್ ಗೂಢಚರ್ಯೆ ಕುತಂತ್ರಾಂಶವನ್ನು ಕೇಂದ್ರ ಸರ್ಕಾರ ಬಳಸಿಲ್ಲ ಎನ್ನುವುದಾರೆ, ಯಾವ ವಿದೇಶಿ ಸರ್ಕಾರಗಳು ನಮ್ಮ ದೇಶದ ರಾಜಕಾರಣಿಗಳು, ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಪತ್ರಕರ್ತರ ಮೇಲೆ ಗೂಢಚರ್ಯೆ ನಡೆಸಿವೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಎನ್ಸಿಪಿ ವಕ್ತಾರ ಮತ್ತು ಸಚಿವ ನವಾಬ್ ಮಲಿಕ್ ಮಂಗಳವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್, ಪೆಗಾಸಸ್ ಗೂಢಚರ್ಯೆಗೆ ಕುತಂತ್ರಾಂಶಕ್ಕೆ ಸಂಬಂಧಿಸಿದಂತೆ ಇಸ್ರೇಲಿ ಕಂಪನಿ ಎನ್ಎಸ್ಒ ಸಮೂಹದ ಜತೆ ಯಾವುದೇ ವ್ಯವಹಾರ ನಡೆದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. ಹಾಗಾದರೆ, ಕೇಂದ್ರ ಸರ್ಕಾರ ತಕ್ಷಣ ತನಿಖೆಗೆ ಆದೇಶಿಸಿ, ಯಾವ ವಿದೇಶಿ ಸರ್ಕಾರ ಕೆಲಸ ಮಾಡಿದೆ ಎಂದು ಪತ್ತೆ ಮಾಡಬೇಕು‘ ಎಂದು ಒತ್ತಾಯಿಸಿದ್ದಾರೆ.
ಈ ಕೆಲಸ ಸರ್ಕಾರದಲ್ಲ ಎಂದಾದ ಮೇಲೆ, ಇದೊಂದು ಗಂಭೀರ ಪ್ರಕರಣವಾಗುತ್ತದೆ. ತ್ವರಿತಗತಿಯಲ್ಲಿ ತನಿಖೆ ನಡೆಸಿ, ಪ್ರಕರಣಕ್ಕೆ ಕಾರಣರಾದವರನ್ನು ಪತ್ತೆ ಮಾಡಬೇಕು ಎಂದು ಮಲಿಕ್ ಆಗ್ರಹಿಸಿದ್ದಾರೆ.
‘ಯಾವುದೇ ಸರ್ಕಾರಿ ಇಲಾಖೆಯು ಎನ್ಎಸ್ಒ ಸಮೂಹ ಅಭಿವೃದ್ಧಿಪಡಿಸಿದ ಪೆಗಾಸಸ್ ಗೂಢಚರ್ಯೆ ಕುತಂತ್ರಾಂಶವನ್ನು ಬಳಸಿಲ್ಲ ಎಂದು ಕೇಂದ್ರ ಸರ್ಕಾರ ಬಹಿರಂಗವಾಗಿ ಹೇಳಬೇಕು. ಕೇವಲ ಒಂದು ಇಲಾಖೆ ಮಾತ್ರ ಈ ಸೇವೆಯ ಬಳಕೆ ಮಾಡಿಲ್ಲ ಎಂದು ಹೇಳಿದರೆ, ಇದು ಸಂಪೂರ್ಣ ಕೇಂದ್ರ ಸರ್ಕಾರದ ಸ್ಪಷ್ಟೀಕರಣವಾಗುವುದಿಲ್ಲ‘ ಎಂದು ಎನ್ಸಿಪಿ ನಾಯಕ ಮಲಿಕ್ ಹೇಳಿದ್ದಾರೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿನ ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕೀಯ ನಾಯಕರ ಮೇಲೆ ನಿಗಾ ಇರಿಸಲು ಪೆಗಾಸಸ್ ಗೂಢಚರ್ಯೆ ಕುತಂತ್ರಾಂಶವನ್ನು ಬಳಸಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ಸೋಮವಾರ ‘ಇಸ್ರೇಲ್ನ ಎನ್ಎಸ್ಒ ಕಂಪನಿಗಳ ಸಮೂಹದೊಂದಿಗೆ ಯಾವುದೇ ವಹಿವಾಟು ನಡೆಸಿಲ್ಲ‘ ಎಂದು ಸ್ಪಷ್ಪನೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.