ಮುಂಬೈ: ಮಹಾರಾಷ್ಟ್ರದಲ್ಲಿ ಈಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದತ್ತ ಜನರು ಒಲವು ತೋರಿದ್ದಾರೆ ಎಂದು ಮಂಗಳವಾರ ಶಿವಸೇನಾ ಹೇಳಿದೆ.
ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ‘ರಾಜಕೀಯ ಕ್ರಾಂತಿ’ ನಡೆಸಲು ಸಾಧ್ಯವಿಲ್ಲ ಎಂದು ಎಂವಿಎ ತನ್ನ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಬಿಜೆಪಿ ವಿರುದ್ಧ ಟೀಕೆ ವ್ಯಕ್ತಪಡಿಸಿದೆ.
ಎಂವಿಎ ಪರವಾಗಿ ಜನರು ನೀಡಿರುವ ತೀರ್ಪನ್ನು ಬಿಜೆಪಿ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಜನರೇ ಮತ್ತಷ್ಟು ಹಿಮ್ಮೆಟ್ಟಿಸುತ್ತಾರೆ ಎಂದೂ ಸೇನಾ ಹೇಳಿದೆ.
12,711 ಗ್ರಾಮ ಪಂಚಾಯಿತಿಗಳಿಗೆ ಜ. 15ರಂದು ನಡೆದ ಚುನಾವಣೆಯಲ್ಲಿ ಸುಮಾರು 1.25ಲಕ್ಷ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಿವಸೇನಾ, ಕಾಂಗ್ರೆಸ್, ಎನ್ಸಿಪಿಯನ್ನೊಳಗೊಂಡ ಆಡಳಿತಾರೂಢ ಎಂವಿಎ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದೇವೆ ಎಂದು ಹೇಳಿಕೊಂಡರೆ, ಮತ್ತೊಂದೆಡೆ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳೂ ಭಾರಿ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.
‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಬಲ ನಾಯಕರಾಗಿದ್ದರೆ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಪ್ರಬಲ ನಾಯಕರೆನಿಸಿಕೊಂಡಿದ್ದಾರೆ. ಠಾಕ್ರೆ ನೇತೃತ್ವದ ಸರ್ಕಾರವು ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದು, ಅಭಿವೃದ್ಧಿಯತ್ತ ಸಾಗಿದೆ’ ಎಂದೂ ಸೇನಾ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.