ADVERTISEMENT

ಪೆಗಾಸಸ್ ಬೇಹುಗಾರಿಕೆ: ಎಸ್‌ಐಟಿಯಿಂದ ತನಿಖೆ ನಡೆಸಲು ಕೋರಿ ‘ಸುಪ್ರೀಂ’ಗೆ ಅರ್ಜಿ

ಪಿಟಿಐ
Published 22 ಜುಲೈ 2021, 8:57 IST
Last Updated 22 ಜುಲೈ 2021, 8:57 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಪತ್ರಕರ್ತರು, ಹೋರಾಟಗಾರರು, ರಾಜಕೀಯ ನಾಯಕರು ಮತ್ತಿತರ ಮೇಲೆ ಪೆಗಾಸಸ್‌ ಬೇಹುಗಾರಿಕೆ ನಡೆಸಿರುವ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ವಕೀಲ ಎಂ.ಎಲ್‌.ಶರ್ಮಾ, ‘ಪೆಗಾಸಸ್ ಗೂಢಚಾರಿಕೆ ಪ್ರಕರಣ, ದೇಶದ ಪ್ರಜಾಪ್ರಭುತ್ವ, ನ್ಯಾಯಾಂಗ ಮತ್ತು ದೇಶದ ಭದ್ರತೆ ಮೇಲೆ ನಡೆದಿರುವ ಗಂಭೀರವಾದ ದಾಳಿ. ಅಷ್ಟೇ ಅಲ್ಲ, ಈ ಬೇಹುಗಾರಿಕೆಯನ್ನು ಉತ್ತರಾದಾಯಿತ್ವ ಇಲ್ಲದೇ ಎಲ್ಲೆಂದರಲ್ಲಿ ಬಳಸಲಾಗುತ್ತಿದೆ. ಇದು ನೈತಿಕತೆಯನ್ನು ವಿರೂಪಗೊಳಿಸುವ‘ ಪ್ರಯತ್ನ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

‘ಖಾಸಗಿತನ ಎಂದರೆ ಕೇವಲ ಯಾರಿಗೂ ಹೇಳದಂತೆ ಮುಚ್ಚಿಟ್ಟುಕೊಳ್ಳುವ ವಿಚಾರವಲ್ಲ. ಅದು ನಮ್ಮ ಸ್ವಂತ ಆಲೋಚನೆಗಳು ಮತ್ತು ಅಸ್ತಿತ್ವವು ಬೇರೊಬ್ಬರ ಉದ್ದೇಶಗಳ ಸಾಧನವಾಗಬಾರದು ಎಂದು ರಕ್ಷಿಸುವ ಪ್ರಯತ್ನ. ಇದು ಘನತೆಯ ಅತ್ಯಗತ್ಯ ಅಂಶವಾಗಿದೆ‘ ಎಂದು ಅದು ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

‘ಪೆಗಾಸಸ್ ಕೇವಲ ಕಣ್ಗಾವಲು ಸಾಧನವಷ್ಟೇ ಅಲ್ಲ. ಇದು ಭಾರತೀಯ ರಾಜಕೀಯದ ಮೇಲೆ ದಾಳಿ ಮಾಡಲು ಬಳಸುವ ಸೈಬರ್-ಆಯುಧವಾಗಿದೆ‘ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.‌

ಪೆಗಾಸಸ್ ಬೇಹುಗಾರಿಕೆ ಪ್ರಕರಣ ದಿನೇ ದಿನೇ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.