ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸಿಬಿಐ ತನಿಖೆ ಕೋರಿ ಕೇರಳ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯು ‘ಪಿತೂರಿ’ಯ ಭಾಗ ಎಂದು ಪಿಣರಾಯಿ ಪುತ್ರಿ ವೀಣಾ ಟಿ. ಹೇಳಿದ್ದಾರೆ.
ವಿವಾದಿತ ಗಣಿ ಕಂಪನಿ ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ಸ್ ಲಿಮಿಟೆಡ್ನಿಂದ (ಸಿಎಂಆರ್ಎಲ್) ವಿಜಯನ್ ಲಂಚ ಸ್ವೀಕರಿಸಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ತನಿಖೆ ಕೋರಿ ಪತ್ರಕರ್ತ ಎಂ.ಆರ್.ಅಜಯನ್ ಅವರು ಈ ಅರ್ಜಿ ಸಲ್ಲಿಸಿದ್ದರು.
ವೀಣಾ ಅವರ ಬೆಂಗಳೂರು ಮೂಲದ ಐಟಿ ಸಂಸ್ಥೆ ಎಕ್ಸ್ಲಾಜಿಕ್ ಸಲ್ಯೂಷನ್ಗೆ ಸಿಎಂಆರ್ಎಲ್ ಹಣ ನೀಡಿದ್ದು, ಪುತ್ರಿಯ ಸಂಸ್ಥೆಯ ಮೂಲಕ ಆ ಹಣ ವಿಜಯನ್ ಅವರನ್ನು ತಲುಪಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಈ ಅರ್ಜಿಗೆ ವೀಣಾ ಅವರು ಪ್ರತಿಕ್ರಿಯೆ ಸಲ್ಲಿಸಿದ್ದು, ‘ನನ್ನ ಸಂಸ್ಥೆಯ ವಹಿವಾಟುಗಳಿಗೂ, ನನ್ನ ತಂದೆಗೂ ಯಾವುದೇ ಸಂಬಂಧವಿಲ್ಲ. ಸಿಎಂಆರ್ಎಲ್ನಿಂದ ಲಂಚ ಸ್ವೀಕರಿಸಿರುವುದಕ್ಕೂ ಅದಕ್ಕೆ ಬದಲಿಗೆ ಆ ಸಂಸ್ಥೆಗೆ ಯಾವುದೇ ಸಹಾಯವನ್ನು ಮಾಡಿರುವುದಕ್ಕೂ ಯಾವುದೇ ಪುರಾವೆಗಳೂ ಇಲ್ಲ. ಆದಾಗ್ಯೂ, ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಪಿತೂರಿಯ ಭಾಗವಾಗಿ ಈ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ವಜಾಗೊಳಿಸಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.