ನವದೆಹಲಿ : ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಟ್ರೇಡ್ಮಾರ್ಕ್ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡದಂತೆ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ದೇವ್ ಆಶಿಶ್ ದುಬೆ ಎಂಬವರು ವಕೀಲ ಓಂ ಪ್ರಕಾಶ್ ಪರಿಹಾರ್ ಅವರ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ.
‘ಆಪರೇಷನ್ ಸಿಂಧೂರ ಎಂಬುದು ದೇಶವಾಸಿಗಳ ಭಾವನೆ ಮಾತ್ರವಲ್ಲದೇ, ದೇಶಕ್ಕಾಗಿ ಉಸಿರು ಚೆಲ್ಲಿದವರ ತ್ಯಾಗ, ಪಹಲ್ಗಾಮ್ನಲ್ಲಿ ಹತ್ಯೆಗೀಡಾದ ಅಮಾಯಕರ ಸಾವಿನ ಆಕ್ರೋಶವನ್ನೂ ಒಳಗೊಂಡಿದೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಯೋಧರ ಪತ್ನಿಯರ ತ್ಯಾಗದ ಪ್ರತೀಕವಾಗಿರುವ ‘ಆಪರೇಷನ್ ಸಿಂಧೂರ’ ಹೆಸರು ಜನರ ಭಾವೆನೆಗಳನ್ನು ವಾಣಿಜ್ಯದ ಉದ್ದೇಶಕ್ಕೆ ಬಳಸುವವರ ಕೈಗೆ ಸೇರಬಾರದು. ಹೀಗಾಗಿ ಅದರ ನೋಂದಣಿಗೆ ಅವಕಾಶ ನೀಡಬಾರದು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಆಪರೇಷನ್ ಸಿಂಧೂರ ಹೆಸರಿನ ಟ್ರೇಡ್ ಮಾರ್ಕ್ಗಾಗಿ ಈಗಾಗಲೇ 5 ಮಂದಿ ಅರ್ಜಿ ಸಲ್ಲಿಸಿರುವಂತೆಯೇ ‘ಸುಪ್ರೀಂ’ನಲ್ಲಿ ಈ ಮನವಿ ಸಲ್ಲಿಕೆಯಾಗಿರುವುದು ಮಹತ್ವ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.