ADVERTISEMENT

ಕಾಂಗ್ರೆಸ್‌ನಿಂದ ಹಿಂದೂ ಪರಂಪರೆಗೆ ಅಗೌರವ: ಬಿಜೆಪಿ

ಅಲಹಾಬಾದ್‌ನ ಮ್ಯೂಸಿಯಂನಲ್ಲಿ ಇಟ್ಟಿದ್ದ ಸೆಂಗೋಲ್‌

ಪಿಟಿಐ
Published 25 ಮೇ 2023, 15:48 IST
Last Updated 25 ಮೇ 2023, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಪವಿತ್ರವಾದ ‘ಸೆಂಗೋಲ್‌’ ಅನ್ನು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ಕೊಡುಗೆಯಾಗಿ ನೀಡಲಾಗಿದ್ದ ಬಂಗಾರದ ಕೋಲು ಎಂದು ಹೇಳುತ್ತಿದ್ದ ಕಾಂಗ್ರೆಸ್‌ ಅದನ್ನು ಮ್ಯೂಸಿಯಂನಲ್ಲಿ ಇಟ್ಟಿತ್ತು. ಆ ಮೂಲಕ ಕಾಂಗ್ರೆಸ್‌ ಪಕ್ಷ ಹಿಂದೂ ಆಚರಣೆಗಳಿಗೆ ಅಗೌರವ ತೋರಿಸಿತ್ತು’ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.

ಈ ಕುರಿತು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿದ್ದಾರೆ.

‘ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ, ಅಧಿಕಾರ ಹಸ್ತಾಂತರದ ದ್ಯೋತಕವಾಗಿ ಈ ಸೆಂಗೋಲ್‌ ಅನ್ನು ನೆಹರೂ ಅವರಿಗೆ ನೀಡಲಾಗಿತ್ತು. ಅದಕ್ಕೆ ಸಲ್ಲಬೇಕಾದ ಗೌರವಯುತ ಸ್ಥಾನ ನೀಡಿರಲಿಲ್ಲ. ನೆಹರೂ ಅವರಿಗೆ ನೀಡಿದ್ದ ಬಂಗಾರದ ಕೋಲು ಎಂದು ಹೇಳಿ, ಅದನ್ನು ಆನಂದ ಭವನಕ್ಕೆ (ನೆಹರೂ ಅವರ ಪೂರ್ವಿಕರ ನಿವಾಸ) ಒಯ್ಯಲಾಗಿತ್ತು. ಹಿಂದೂ ಆಚರಣೆಗಳ ಕುರಿತ ಕಾಂಗ್ರೆಸ್‌ ತೋರುವ ಅಸಡ್ಡೆ ಹೀಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಈ ಸೆಂಗೋಲ್‌ ಅನ್ನು ನೂತನ ಸಂಸತ್‌ ಭವನದ ಲೋಕಸಭೆಯಲ್ಲಿ ಸ್ಪೀಕರ್‌ ಪೀಠದ ಸಮೀಪ ಪ್ರತಿಸ್ಠಾಪಿಸುತ್ತಿದ್ದು, ಐತಿಹಾಸಿಕ ನ್ಯಾಯದಂಡಕ್ಕೆ ಸಲ್ಲಬೇಕಾದ ಗೌರವ ನೀಡಿದಂತಾಗಲಿದೆ. ವಿಶೇಷ ಸಂದರ್ಭಗಳಲ್ಲಿ ಅದನ್ನು ಬೇರೆಡೆ ಒಯ್ದು ಪ್ರದರ್ಶಿಸಲಾಗುತ್ತದೆ’ ಎಂದಿದ್ದಾರೆ.

‘ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್‌ ಭವನದಲ್ಲಿ ಈ ಸೆಂಗೋಲ್‌ ಪ್ರತಿಷ್ಠಾಪಿಸಲಾಗುತ್ತಿದೆ. ಆದರೆ, ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ವಿರೋಧ ಪಕ್ಷಗಳು ಹೇಳಿವೆ. ಹೀಗಾಗಿ, ಈಗ ಸೆಂಗೋಲ್‌ ವಿರುದ್ಧ ವಿರೋಧ ಪಕ್ಷಗಳು ಎಂಬಂತಾಗಿದೆ’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಆಹ್ವಾನ ಸ್ವೀಕರಿಸಿದ ಬಿಎಸ್‌ಪಿ:  ನೂತನ ಭವನ ಉದ್ಘಾಟನಾ ಸಮಾರಂಭದ ಆಹ್ವಾನವನ್ನು ಬಿಎಸ್‌‍ಪಿ ಗುರುವಾರ ಸ್ವೀಕರಿಸಿದೆ.

‘ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿರುವ ಕೆಲ ವಿರೋಧ ಪಕ್ಷಗಳ ನಿಲುವು ಸರಿಯಲ್ಲ’ ಎಂದು ಬಿಎಸ್‌ಪಿ ಹೇಳಿದೆ.

‘ಪೂರ್ವನಿರ್ಧರಿತ ಸಭೆಗಳ ಕಾರಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ’ ಎಂದು ಸರಣಿ ಟ್ವೀಟ್‌ ಮಾಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಸಮಾರಂಭಕ್ಕೆ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.