ನವದೆಹಲಿ : ದೆಹಲಿ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಹೈಕೋರ್ಟ್ನಲ್ಲಿ ದೂರು ಸಲ್ಲಿಸಲಾಗಿದೆ.
ಪರಾಜಿತ ಅಭ್ಯರ್ಥಿ ಪ್ರತಾಪ್ ಚಂದ್ರ ಅವರು ನೀಡಿದ ದೂರು ಆಧರಿಸಿ ನ್ಯಾಯಾಧೀಶ ವಿ.ಕೆ. ರಾವ್ ಅವರು, ಸಿಸೋಡಿಯಾ, ಚುನಾವಣಾ ಆಯೋಗದ ಮಾಧ್ಯಮ ಮತ್ತು ಮೇಲ್ವಿಚಾರಣಾ ಸಮಿತಿ (ಎಂಸಿಎಂಸಿ) ಹಾಗೂ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅರ್ಜಿದಾರರು ಎತ್ತಿರುವ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.
ಕೇಜ್ರಿವಾಲ್ ಅವರ ವಿಚಾರಕ್ಕೆ ಸಂಬಂಧಿಸಿದಂತೆ, ಅರ್ಜಿಯಲ್ಲಿ ಕೆಲವುದೋಷಗಳಿದ್ದು, ಅವುಗಳನ್ನು ಸರಿಪಡಿಸಿದ ಬಳಿಕ ಆದೇಶ ನೀಡುವುದಾಗಿ ನ್ಯಾಯಾಧೀಶ ಮುಕ್ತಾ ಗುಪ್ತಾ ತಿಳಿಸಿದರು.
ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರು ಮತದಾನಕ್ಕೆ 48 ಗಂಟೆ ಬಾಕಿಯಿರುವಾಗ ಜಾಹೀರಾತಿನ ಮೂಲಕ ಚುನಾವಣಾ ಪ್ರಚಾರ ನಡೆಸಿ, ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಪ್ರತಾಪ್ ಚಂದ್ರ ಅವರು ಇಬ್ಬರು ನಾಯಕರ ವಿರುದ್ಧವೂ ಸ್ಪರ್ಧಿಸಿ ಸೋತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.