ADVERTISEMENT

ಪೌರತ್ವ (ತಿದ್ದುಪಡಿ) ಮಸೂದೆ ಬೆಂಬಲಿಸುವಂತೆ ಮಮತಾಗೆ ಮೋದಿ ಮನವಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 10:12 IST
Last Updated 2 ಫೆಬ್ರುವರಿ 2019, 10:12 IST
   

ಠಾಕೂರ್‌ನಗರ:ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ‘ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಬೆಂಬಲಿಸುವಂತೆ ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

24 ಉತ್ತರ ಪರಗಣ ಜಿಲ್ಲೆ ಠಾಕೂರ್‌ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ದೇಶದಿಂದ ಯಾರು ಹೊರಗೆ ಹೋಗಿದ್ದಾರೋ ಅವರು ಮತ್ತೆ ದೇಶಕ್ಕೆ ಮರಳಲು ಉತ್ಸುಕರಾಗಿದ್ದಾರೆ, ಅವರು ದೇಶಕ್ಕೆ ಬರಬೇಕಾದರೆ ‘ಪೌರತ್ವ (ತಿದ್ದುಪಡಿ) ಮಸೂದೆ’ ಜಾರಿಯಾಗಬೇಕು. ಈ ಮಸೂದೆಗೆ ಮಮತಾ ಬ್ಯಾನರ್ಜಿ ಬೆಂಬಲ ನೀಡಬೇಕು ಎಂದರು.

ಈಗಾಗಲೇ ಈ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ರಾಜಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಬೇಕಾದರೆ ಟಿಎಂಸಿ ಬೆಂಗಲ ಅಗತ್ಯ. ಮುಂಬರುವ ಬಜೆಟ್‌ ಮೇಲಿನ ಚರ್ಚೆಯ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗದಿದ್ದರೆ ಅದು ರದ್ದಾಗಲಿದೆ. ಯಾಕೆಂದರೆ ಮಾರ್ಚ್‌ ಅಂತ್ಯಕ್ಕೆ ಈ ಲೋಕಸಭೆಯ ಅವಧಿ ಮುಕ್ತಾಯವಾಗಲಿದೆ. ಈ ಮಸೂದೆ ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿರುವ ಟಿಎಂಸಿ ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿದೆ.

ADVERTISEMENT


(ಸಮಾವೇಶದಲ್ಲಿ ನೆರೆದಿದ್ದ ಜನತೆ)

24 ಉತ್ತರ ಪರಗಣ ಜಿಲ್ಲೆಯಲ್ಲಿ ಮತುವಾ ಸಮುದಾಯದವರು ಬಹು ಸಂಖ್ಯಾತರಾಗಿದ್ದಾರೆ. ಇವರ ಸಂಖ್ಯೆ ಸುಮಾರು 30 ಲಕ್ಷಕ್ಕೂ ಹೆಚ್ಚು. ಇದೇ ಸಮುದಾಯದ ಮಮತಾ ಠಾಕೂರ್‌ ಟಿಎಂಸಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮತುವಾ ಮಹಾಸಭಾದ ಸಹಯೋಗದೊಂದಿಗೆ ಬಿಜೆಪಿ ಈ ಸಮಾವೇಷವನ್ನು ಆಯೋಜಿಸಿದೆ.

ಶುಕ್ರವಾರ ಬಜೆಟ್‌ ಮಂಡಿಸಿದರ ಬಗ್ಗೆ ಮಾತನಾಡಿದ ಮೋದಿ ಸಾಮಾನ್ಯ ವರ್ಗದವರಿಗೆ ತೆರಿಗೆ ಹೊರೆ ಇಳಿಸಲಾಗಿದೆ. ಕೂಲಿ ಕಾರ್ಮಿಕರಿಗೆ ಪಿಂಚಣಿ ಹಾಗೂ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿಗಳ ಹಣಕಾಸು ನೆರವು ನೀಡಲಾಗುವುದು ಎಂದರು.

ಮಧ್ಯಪ್ರದೇಶದಲ್ಲಿ ರೈತರೊಬ್ಬರ 13 ರೂಪಾಯಿ ಸಾಲ ಮನ್ನಾ ಮಾಡಲಾಗಿದೆ, ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ ಮಾಡಲು ಆ ಸರ್ಕಾರ ಹಿಂದೇಟು ಹಾಕುತ್ತಿದೆ. ಕರ್ನಾಟಕದಲ್ಲಿ ರೈತರ ಮೇಲೆ ಪೊಲೀಸ್‌ ದಬ್ಬಾಳಿಕೆ ನಡೆಸಲಾಗುತ್ತಿದೆ. ಇವೆಲ್ಲ ಕಾಂಗ್ರೆಸ್‌ ಸರ್ಕಾರದ ಸಾಧನೆಗಳು ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.