ADVERTISEMENT

ಭಾರತದ ಸಾಧನೆ ಜಗತ್ತಿಗೇ ಬೆಳಕು ನೀಡುವಂತಹದು: ಪ್ರಧಾನಿ ಮೋದಿ

‘ಅಮೃತ ಮಹೋತ್ಸವ’ಕ್ಕೆ ಚಾಲನೆ * ಸಂವಿಧಾನ, ಪ್ರಜಾಪ್ರಭುತ್ವ ಕುರಿತು ನಮಗೆ ಹೆಮ್ಮೆ

ಪಿಟಿಐ
Published 12 ಮಾರ್ಚ್ 2021, 11:45 IST
Last Updated 12 ಮಾರ್ಚ್ 2021, 11:45 IST
ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವಕ್ಕೆ ಶುಕ್ರವಾರ ಅಹಮದಾಬಾದ್‌ನಲ್ಲಿ ಚಾಲನೆ ನೀಡಿದ ಪ್ರಧಾನಿ ಮೋದಿ ಸಭಿಕರತ್ತ ಕೈಬೀಸಿದರು
ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವಕ್ಕೆ ಶುಕ್ರವಾರ ಅಹಮದಾಬಾದ್‌ನಲ್ಲಿ ಚಾಲನೆ ನೀಡಿದ ಪ್ರಧಾನಿ ಮೋದಿ ಸಭಿಕರತ್ತ ಕೈಬೀಸಿದರು   

ಅಹಮದಾಬಾದ್: ‘ದೇಶದ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಸಂಪ್ರದಾಯಗಳ ಕುರಿತು ನಮಗೆ ಹೆಮ್ಮೆ ಇದೆ. ಭಾರತವು ಪ್ರಜಾಪ್ರಭುತ್ವದ ತಾಯಿ, ಅದನ್ನು ಇನ್ನಷ್ಟು ಬಲಪಡಿಸುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಭಾರತ ಸಾಧನೆ ಕೇವಲ ನಮ್ಮದಷ್ಟೇ ಅಲ್ಲ. ಇದು, ಅದು ಜಗತ್ತಿಗೇ ಬೆಳಕು ನೀಡುತ್ತಿದೆ’ ಎಂದು ‍‍ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ‘ಆಜಾದಿ ಕಾ ಅಮೃತ್‌ ಮಹೋತ್ಸವ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಕಾರ್ಯಕ್ರಮಗಳು ಆಗಸ್ಟ್ 15, 2023ರವರೆಗೂ ನಡೆಯಲಿವೆ ಎಂದೂ ತಿಳಿಸಿದರು.

ಮಹಾತ್ಮ ಗಾಂಧಿ ಅವರ ಹೆಸರಾಂತ ದಂಡಿಯಾತ್ರೆ ನೆನಪಿಗಾಗಿ ಸಾಬರಮತಿ ಆಶ್ರಮದಿಂದ ದಂಡಿವರೆಗೆ ಆಯೋಜಿಸಿರುವ ಪಾದಯಾತ್ರೆಗೂ ಪ್ರಧಾನಿ ಚಾಲನೆ ನೀಡಿದರು.

ADVERTISEMENT

‘ದೇಶದ ಅಸಾಮಾನ್ಯ ನಾಯಕರ ಸಾಧನೆ, ವ್ಯಕ್ತಿತ್ವ ಕುರಿತ ಇತಿಹಾಸ ಕಾಯ್ದಿಡಲು ಕಳೆದ ಆರು ವರ್ಷಗಳಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.

81 ಜನರು ಈ ಪಾದಯಾತ್ರೆಯಲ್ಲಿ ಭಾಗವಹಿಸುವರು. 25 ದಿನ ಕಾಲ ಒಟ್ಟು 386 ಕಿ.ಮೀ. ಕ್ರಮಿಸಿ ಏಪ್ರಿಲ್‌ 5ರಂದು ನವ್ಸಾರಿಯಲ್ಲಿರುವ ದಂಡಿಯನ್ನು ಪಾದಯಾತ್ರೆ ತಲುಪಲಿದೆ. ಮಹಾತ್ಮ ಗಾಂಧಿ ಅವರು ಮಾರ್ಚ್ 12, 1030ರಂದು ಉಪ್ಪಿನ ಸತ್ಯಾಗ್ರಹ ಘೋಷಿಸಿ ದಂಡಿವರೆಗೆ ಪಾದಯಾತ್ರೆ ನಡೆಸಿದ್ದು, ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ್ದ ತೆರಿಗೆಯನ್ನು ವಿರೋಧಿಸುವುದು ಇದರ ಉದ್ದೇಶವಾಗಿದ್ದು, ಈ ಯಾತ್ರೆ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಅಭಿವೃದ್ಧಿ ಕುರಿತ ಆತ್ಮನಿರ್ಭರ ಚಿಂತನೆಯು ಅಭಿವೃದ್ಧಿಯ ದೃಷ್ಟಿಯಿಂದಜಗತ್ತಿಗೇ ಹೊಸ ವೇಗ ನೀಡಲಿದೆ. ಅಭಿವೃದ್ಧಿಯ ಪಥದಲ್ಲಿ ಸಾಗಲು ಪಂಚ ಆಧಾರಸ್ತಂಭಗಳಿವೆ. ಇವು, –ಸ್ವಾತಂತ್ರ್ಯ ಹೋರಾಟ, 75ರ ಚಿಂತನೆ, 75 ವರ್ಷದ ಸಾಧನೆ, 75 ವರ್ಷದ ಕ್ರಿಯೆ ಮತ್ತು 75 ವರ್ಷದ ಪರಿಹಾರ– ಆಗಿವೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಸಾಧನೆಗಳನ್ನು ಪಟ್ಟಿ ಮಾಡಿದ ಪ್ರಧಾನಿ, ಈ ಎಲ್ಲ ಇತಿಹಾಸವನ್ನು ಸಂರಕ್ಷಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ದಂಡಿಯಾತ್ರೆ ಮುಕ್ತಾಯಗೊಂಡ ಸ್ಥಳದ ಪುನರುಜ್ಜೀವನ ಕಾರ್ಯ ಎರಡು ವರ್ಷದ ಹಿಂದೆಯೇ ಮುಗಿದಿದೆ. ಸ್ವತಂತ್ರ ಭಾರತದ ಪ್ರಥಮ ಸರ್ಕಾರ ರಚನೆಯಾದ ನಂತರ ಸುಭಾಷ್ ಚಂದ್ರ ಬೋಸ್ ಅವರು ಧ್ವಜಾರೋಹಣ ಮಾಡಿದ್ದ ಅಂಡಮಾನ್‌ನಲ್ಲಿರುವ ಸ್ಥಳದ ಪುನರುಜ್ಜೀವನ ಕಾರ್ಯವೂ ನಡೆಯಲಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಪ್ರಧಾನಿ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿ, ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ನಮನ ಸಲ್ಲಿಸಿದರು. ಬಳಿಕ ಸಂದರ್ಶಕರ ಪುಸ್ತಕದಲ್ಲಿ, ‘ಬಾಪು ಅವರ ಪ್ರೇರೇಪಣೆಯೊಂದಿಗೆ ನಾನು ಸಾಬರಮತಿ ಆಶ್ರಮಕ್ಕೆ ಬಂದಿದ್ದು, ಈ ಭೇಟಿಯೊಂದಿಗೆ ರಾಷ್ಟ್ರನಿರ್ಮಾಣದ ಬದ್ಧತೆಯು ಇನ್ನಷ್ಟು ದೃಢವಾಗಿದೆ’ ಎಂದು ಬರೆದರು.

ಮಹಾತ್ಮ ಗಾಂಧಿ ಅವರೇ ಆತ್ಮನಿರ್ಭರ (ಸ್ವಾವಲಂಬನೆ) ಮತ್ತು ಆತ್ಮವಿಶ್ವಾಸ ಸಂದೇಶವನ್ನು ನೀಡಿದ್ದರು ಎಂದು ಅವರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.