ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಪ್ರವಾಸಕ್ಕಾಗಿ ಇಂದು ಬೆಳಿಗ್ಗೆ ಇಲ್ಲಿಗೆ ಆಗಮಿಸಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಸ್ವಾಗತಿಸಿದರು.
ಮೋದಿ ಅವರು, ಗುರುವಾರ ನಿಧನರಾದ ಗುಜರಾತ್ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಕೇಶುಭಾಯ್ ಪಟೇಲ್ ಅವರ ಕುಟುಂಬವನ್ನು ಭೇಟಿಯಾಗಲು ವಿಮಾನ ನಿಲ್ದಾಣದಿಂದ ಗಾಂಧಿನಗರಕ್ಕೆ ತೆರಳಿದರು.
ಇತ್ತೀಚೆಗೆ ನಿಧನರಾದ ಗುಜರಾತಿ ಸಿನಿಮಾ ರಂಗದ ಸೂಪರ್ಸ್ಟಾರ್ ನರೇಶ್ ಕನೋಡಿಯಾ ಮತ್ತು ಅವರ ಸಹೋದರ ಸಂಗೀತ ಸಂಯೋಜಕ ಮಹೇಶ್ ಕನೋಡಿಯಾ ಅವರ ಕುಟುಂಬ ಸದಸ್ಯರನ್ನು ಇದೇ ಸಂದರ್ಭದಲ್ಲಿ ಭೇಟಿಯಾಗಬಹುದೆಂದು ನಿರೀಕ್ಷಿಸಲಾಗಿದೆ.ಗಾಂಧಿನಗರ ನಗರದಲ್ಲಿರುವ ತಮ್ಮ ತಾಯಿ ಹಿರಾಬಾ ಅವರನ್ನು ತಮ್ಮ ಕಿರಿಯ ಸಹೋದರ ಪಂಕಜ್ ಮೋದಿಯವರೊಂದಿಗೆ ಭೇಟಿಯಾಗುವ ಸಾಧ್ಯತೆ ಇದೆ.
ಎರಡು ದಿನಗಳ ಗುಜರಾತ್ ಭೇಟಿಯಲ್ಲಿ ಕೆವಡಿಯಾ ಮತ್ತು ಅಹಮದಾಬಾದ್ ನಡುವೆ ‘ಸೀಪ್ಲೇನ್‘ ಸೇವೆ ಉದ್ಘಾಟಿಸಲಿದ್ದಾರೆ. ಇದೇ ವೇಳೆ ‘ಸ್ಟ್ಯಾಚ್ಯು ಆಫ್ ಯುನಿಟಿ‘– ವಲಭಭಾಯಿ ಪಟೇಲ್ ಅವರ ಪುತ್ಥಳಿಯ ಸ್ಥಳಕ್ಕೆ ಭೇಟಿ ಕೆಲವು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.