ADVERTISEMENT

ಭಾರತದಲ್ಲಿ ಬೌದ್ಧ ಸಾಹಿತ್ಯ ಕೃತಿಗಳ ಗ್ರಂಥಾಲಯ: ಪ್ರಧಾನಿ ಪ್ರಸ್ತಾವ

6ನೇ ಇಂಡೊ–ಜಪಾನ್ ಸಂವಾದ್ ಸಮ್ಮೇಳನದಲ್ಲಿ

ಪಿಟಿಐ
Published 21 ಡಿಸೆಂಬರ್ 2020, 7:01 IST
Last Updated 21 ಡಿಸೆಂಬರ್ 2020, 7:01 IST
   

ನವದೆಹಲಿ: ಭಾರತದಲ್ಲಿ ಸಾಂಪ್ರದಾಯಿಕ ಬೌದ್ಧ ಸಾಹಿತ್ಯ ಮತ್ತು ಧರ್ಮಗ್ರಂಥಗಳಿಗೆ ಮೀಸಲಾಗಿರುವ ಗ್ರಂಥಾಲಯವನ್ನು ಸ್ಥಾಪಿಸುವ ಕುರಿತು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಇದು ಸಂಶೋಧನೆ ಮತ್ತು ಸಂವಾದಕ್ಕೆ ಒಂದು ವೇದಿಕೆಯಾಗಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

6ನೇ ಇಂಡೊ–ಜಪಾನ್ ಸಂವಾದ್ ಸಮ್ಮೇಳನದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ‘ಇಂಡೊ–ಜಪಾನ್‌ ವೇದಿಕೆ ಯುವಕರಲ್ಲಿ ಭಗವಾನ್ ಬುದ್ಧನ ವಿಚಾರಗಳು ಮತ್ತು ಆದರ್ಶಗಳನ್ನು ಉತ್ತೇಜಿಸಲು ಮಹತ್ತರ ಕೆಲಸ ಮಾಡಿದೆ' ಎಂದು ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು.

‘ಇಂಥ ಎಲ್ಲಾ ಸಾಂಪ್ರದಾಯಿಕ ಬೌದ್ಧ ಸಾಹಿತ್ಯ ಮತ್ತು ಧರ್ಮಗ್ರಂಥಗಳನ್ನು ಒಳಗೊಂಡಿರುವ ಗ್ರಂಥಾಲಯ ಸ್ಥಾಪಿಸುವುದಾಗಿ ಹೇಳಿದ ಮೋದಿಯವರು, ‘ಭಾರತದಲ್ಲಿ ಈ ರೀತಿಯ ಸೌಲಭ್ಯಗಳನ್ನು ಸೃಷ್ಟಿಸಲು ನಾವು ಸಂತೋಷಪಡುತ್ತೇವೆ ಮತ್ತು ಅದಕ್ಕೆ ಸೂಕ್ತವಾದ ಸಂಪನ್ಮೂಲಗಳನ್ನು ಒದಗಿಸುತ್ತೇವೆ‘ ಎಂದು ಭರವಸೆ ನೀಡಿದರು.

ADVERTISEMENT

‘ಪ್ರಸ್ತಾಪಿತ ಗ್ರಂಥಾಲಯಕ್ಕೆ ಬೇಕಾದ ಬೌದ್ಧ ಸಾಹಿತ್ಯದ ಡಿಜಿಟಲ್ ಪ್ರತಿಗಳನ್ನು ವಿವಿಧ ದೇಶಗಳಿಂದ ಸಂಗ್ರಹಿಸಿ, ಭಾಷಾಂತರಿಸುವ ಗುರಿ ಇದೆ. ಇವುಗಳನ್ನು ಬೌದ್ಧ ಧರ್ಮದ ಎಲ್ಲಾ ಬಿಕ್ಕುಗಳು ಮತ್ತು ವಿದ್ವಾಂಸರಿಗೆ ಉಚಿತವಾಗಿ ಸಿಗುವಂತೆ ಮಾಡಲಾಗುತ್ತದೆ‘ ಎಂದು ಅವರು ಹೇಳಿದರು.

‘ಗ್ರಂಥಾಲಯವು ಸಾಹಿತ್ಯ ಸಂಗ್ರಹದ ಕೋಣೆಯಾಗದೇ, ಸಂಶೋಧನೆ ಮತ್ತು ಸಂಭಾಷಣೆಗೆ ಒಂದು ವೇದಿಕೆಯಾಗಲಿದೆ. ಮನುಷ್ಯರ ನಡುವೆ, ಸಮಾಜಗಳ ನಡುವೆ ಮತ್ತು ಮನುಷ್ಯ ಮತ್ತು ಪ್ರಕೃತಿಯ ನಡುವೆ 'ನಿಜವಾದ' ಸಂವಾದ ನಡೆಸಲು ಸಹಕಾರಿಯಾಗುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.‌‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.