ನವದೆಹಲಿ: ಲಾಕ್ಡೌನ್ನಿಂದಾಗಿ ತವರಿಗೆ ಮರಳಿ, ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವ ‘ಬಡವರ ಕಲ್ಯಾಣ ಉದ್ಯೋಗ ಅಭಿಯಾನ’ ಎಂಬ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20ರಂದು ಚಾಲನೆ ನೀಡುವರು.
ಬಿಹಾರದ ಖಗರಿಯಾ ಜಿಲ್ಲೆಯ ಬೆಲ್ದೌರ್ ತಾಲ್ಲೂಕಿನ ತೆಲಿಹಾರ್ ಗ್ರಾಮದಲ್ಲಿ ಈ ಯೋಜನೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಚಾಲನೆ ನೀಡುವರು ಎಂದು ಮೂಲಗಳು ಗುರುವಾರ ತಿಳಿಸಿವೆ.
ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಹಾಗೂ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರಲ್ಲದೇ, ಐದು ರಾಜ್ಯಗಳ ಮುಖ್ಯಮಂತ್ರಿಗಳು, ಕೆಲವು ಕೇಂದ್ರ ಸಚಿವರು ಸಹ ಈ ಆನ್ಲೈನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಯೋಜನೆ ವೈಶಿಷ್ಟ್ಯ: ಆರು ರಾಜ್ಯಗಳ 116 ಜಿಲ್ಲೆಗಳ ‘ತವರಿಗೆ ಮರಳಿದ’ 25 ಸಾವಿರ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು ಈ ಯೋಜನೆಯ ಗುರಿ. ಈ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಯ ಅವಧಿ 125 ದಿನ ಇರಲಿದೆ. ಕಾರ್ಮಿಕರು ಹೊಂದಿರುವ ಕೌಶಲ ಆಧಾರದ ಮೇಲೆ 25 ಬಗೆಯ ಉದ್ಯೋಗ ಒದಗಿಸಲಾಗುತ್ತಿದ್ದು, ಈ ಯೋಜನೆಗೆ ₹ 50,000 ಕೋಟಿ ತೆಗೆದಿರಿಸಲಾಗಿದೆ.
ರೈಲ್ವೆ, ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಒಟ್ಟು 12 ಸಚಿವಾಲಯಗಳ ಸಮನ್ವಯದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.