ನವದೆಹಲಿ: ಕೊರೊನಾ ಸೋಂಕು ಪೀಡಿತ ರಾಷ್ಟ್ರಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ಮಾಡುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆಯ ಸಿಬ್ಬಂದಿಗಳನ್ನು ಪ್ರಧಾನಿನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ವಿದೇಶದಲ್ಲಿರುವ ಜನರನ್ನು ಸ್ಥಳಾಂತರಿಸುವಾಗ ಕೆಲವೆಡೆ ಜನರು ತಮ್ಮನ್ನು ಬಹಿಷ್ಕರಿಸಿದ್ದಾರೆ ಎಂದು ಏರ್ ಇಂಡಿಯಾ ಭಾನುವಾರ ದೂರು ನೀಡಿತ್ತು. ವಿದೇಶದಲ್ಲಿರುವ ಭಾರತೀಯರನ್ನುಸುರಕ್ಷಿತವಾಗಿ ದೇಶಕ್ಕೆ ಕರೆದೊಯ್ಯುವ ಕರ್ತವ್ಯ ನಿರ್ವಹಿಸತ್ತಿರುವಾಗ ಹಲವಾರು ನಿವಾಸಿಗಳು ಇದಕ್ಕೆ ತಡೆಯುಂಟು ಮಾಡಿದ್ದಾರೆ ಎಂದು ಏರ್ ಇಂಡಿಯಾ ತಮ್ಮ ಪ್ರಕಟಣೆಯಲ್ಲಿ ಹೇಳಿತ್ತು.
ಸೋಮವಾರ ಏರ್ ಇಂಡಿಯಾ ಸಂಸ್ಥೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಏರ್ ಇಂಡಿಯಾ ತಂಡದ ಬಗ್ಗೆ ಅತೀವ ಹೆಮ್ಮೆಯಿದೆ. ಇದು ಧೈರ್ಯದಿಂದ ಕಾರ್ಯವೆಸಗಿದ್ದು, ಮಾನವೀಯತೆ ಮೆರೆದಿದೆ. ಅವರ ಈ ಕಾರ್ಯಕ್ಕೆ ದೇಶದಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ .
ಕ್ಯಾಪ್ಟನ್ ಸ್ವಾತಿ ರಾವಲ್ ಮತ್ತು ಕ್ಯಾಪ್ಟನ್ ರಾಜಾ ಚೌಹಾನ್ ನೇತೃತ್ವದಲ್ಲಿ ಏರ್ ಇಂಡಿಯ ಬೋಯಿಂಗ್ 777 ವಿಮಾನದ ಸಿಬ್ಬಂದಿಗಳು ರೋಮ್ನಲ್ಲಿದ್ದ 263 ಜನರನ್ನು ಏರ್ ಲಿಫ್ಟ್ ಮಾಡುತ್ತಿರುವ ಚಿತ್ರವನ್ನು ಟ್ವೀಟಿಸಿದ್ದ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಟ್ವೀಟನ್ನು ಮೋದಿ ರಿಟ್ವೀಟ್ ಮಾಡಿ, ಏರ್ ಇಂಡಿಯಾ ಸಂಸ್ಥೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.