ADVERTISEMENT

ಭಾರತದ ‘ಟೆಕೇಡ್‌’ ಕನಸು ಸಂಶೋಧಕರಿಂದ ನನಸಾಗಲಿದೆ: ಪ್ರಧಾನಿ ಮೋದಿ

2023ರ ಮೊದಲ ‘ಮನದ ಮಾತು’ ಕಾರ್ಯಕ್ರಮದಲ್ಲಿ ಪ್ರಧಾನಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 13:31 IST
Last Updated 29 ಜನವರಿ 2023, 13:31 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಭಾರತದ ಕನಸಿನ ಟೆಕೇಡ್‌ (ತಂತ್ರಜ್ಞಾನ ಕೇಂದ್ರಿತ ದಶಕ) ಇಲ್ಲಿಯ ಸಂಶೋಧಕರ ಸಾಮರ್ಥ್ಯದಿಂದ ಸಾಕಾರಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅವರು ನಡೆಸಿಕೊಟ್ಟ ವರ್ಷದ ಮೊದಲ ‘ಮನದ ಮಾತು’ (ಮನ್‌ ಕಿ ಬಾತ್‌) ಕಾರ್ಯಕ್ರಮದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ವಿದೇಶಗಳಲ್ಲಿ ನೋಂದಣಿಯಾಗುತ್ತಿರುವ ಭಾರತದ ಹಕ್ಕುಸ್ವಾಮ್ಯಗಳಿಗಿಂತ ಹೆಚ್ಚು ಹಕ್ಕುಸ್ವಾಮ್ಯ ನೋಂದಣಿಗಳು ಈಗ ಭಾರತದೊಳಗೇ ಆಗುತ್ತಿವೆ. ಇದು ವೈಜ್ಞಾನಿಕ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯ ಹೆಚ್ಚುತ್ತಿರುವುದಕ್ಕೆ ಸಾಕ್ಷಿ ಎಂದರು.

‘ಜಾಗತಿಕ ಹಕ್ಕುಸ್ವಾಮ್ಯ ನೋಂದಣಿಯಲ್ಲಿ ಭಾರತ 7ನೇ ಸ್ಥಾನ ಪಡೆದಿದೆ. ಟ್ರೇಡ್‌ಮಾರ್ಕ್‌ ನೋಂದಣಿಯಲ್ಲಿ ಐದನೇ ಸ್ಥಾನ ಪಡೆದಿದೆ. ಕಳೆದ ಐದು ವರ್ಷಗಳಲ್ಲಿ ಭಾರತದ ಹಕ್ಕುಸ್ವಾಮ್ಯ ನೋಂದಣಿಯು ಶೇ 50 ಹೆಚ್ಚಳವಾಗಿದೆ. ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲೂ ಭಾರತ ಉತ್ತಮ ಸಾಧನೆ ಮಾಡಿದ್ದು, 2015ರಲ್ಲಿ 80ಕ್ಕಿಂತ ಕಡಿಮೆ ಇದ್ದ ಸೂಚ್ಯಂಕ ಈಗ 40ಕ್ಕೆ ಏರಿದೆ. ಸಂಶೋಧಕರು ಮತ್ತು ಅವರ ಹಕ್ಕುಸ್ವಾಮ್ಯಗಳಿಂದ ಭಾರತದ ಟೆಕೇಡ್‌ ಕನಸು ನನಸಾಗುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದರು.

ADVERTISEMENT

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) 2022ರಲ್ಲಿ 145 ಹಕ್ಕುಸ್ವಾಮ್ಯಗಳನ್ನು ಪಡೆದಿದೆ. ಇದು ಅಪರೂಪದ ದಾಖಲೆ ಎಂದರು.

ದೇಶದಲ್ಲಿ ರಾಮ್‌ಸಾರ್‌ ಪ್ರದೇಶಗಳ (ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಜೌಗು ಪ್ರದೇಶಗಳು) ಸಂಖ್ಯೆಯು 75ಕ್ಕೆ ಏರಿಕೆಯಾಗಿವೆ. 2014ರಲ್ಲಿ ಈ ಪ್ರದೇಶಗಳ ಸಂಖ್ಯೆ 26 ಇತ್ತು ಎಂದು ಮೋದಿ ಅವರು ತಿಳಿಸಿದರು. ಯೋಗ ಮತ್ತು ಸಿರಿಧಾನ್ಯದ ಬಳಕೆಯನ್ನು ಜಗತ್ತು ಸ್ವೀಕರಿಸಿರುವ ಕುರಿತು ಹರ್ಷ ವ್ಯಕ್ತಪಡಿಸಿದ ಅವರು, ಭಾರತದ ಪ್ರಸ್ತಾವನೆ ಅನುಸಾರ 2023ನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ವಿಶ್ವಸಂಸ್ಥೆ ಘೋಷಿಸಿದೆ ಎಂದರು.

‘ಪದ್ಮ ಪ್ರಶಸ್ತಿ ಪುರಸ್ಕೃತದ ಕುರಿತು ಓದಿ’:

ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ‘ಜನರ ಪದ್ಮ’ ಎಂದು ಕರೆದಿರುವ ಅವರು, ಪ್ರಶಸ್ತಿ ಪುರಸ್ಕೃತರ ಯಶೋಗಾಥೆಗಳನ್ನು ಓದುವಂತೆ ಜನರಿಗೆ ಕರೆ ನೀಡಿದ್ದಾರೆ ಮತ್ತು ಅವರ ಜೀವನಗಾಥೆಗಳು ಯುವಜನರಗೆ ಸ್ಫೂರ್ತಿದಾಯಕವಾಗಿವೆ ಎಂದಿದ್ದಾರೆ.

ಪದ್ಮ ಪ್ರಶಸ್ತಿ ಪುರಸ್ಕೃತದಲ್ಲಿ ಹಲವರು ದೇಶದ ಕೀರ್ತಿಯನ್ನು ಎತ್ತಿಹಿಡಿದಿರುವವರು, ‘ದೇಶ ಮೊದಲು’ ಎಂಬ ತತ್ವಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿರುವವರು. ಅವರ ಸೇವೆಗಾಗಿ ಎಂದೂ ಪುರಸ್ಕಾರ ಬಯಸದವರು. ತಮ್ಮ ಕೆಲಸದಲ್ಲಿ ದೊರಕುವ ತೃಪ್ತಿಯೇ ದೊಡ್ಡ ಪುರಸ್ಕಾರ ಎಂದು ಭಾವಿಸಿರುವವರು. ಅಂಥವರಿಗೆ ಪದ್ಮ ಪುರಸ್ಕಾರ ನೀಡಿರುವುದು ದೇಶದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.